ಬೆಂಗಳೂರು, ಮೇ 21 (Daijiworld News/MSP): ಚುನಾವಣೋತ್ತರ ಸಮೀಕ್ಷೆಯಂತೆ ಒಂದು ವೇಳೆ ಫಲಿತಾಂಶ ಹೊರಬಿದ್ದರೆ ಅದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೇ ನೇರ ಕಾರಣ ಎಂದು ಬಹಿರಂಗವಾಗಿ ವಾಗ್ದಾಳಿ ನಡೆಸಿದ ಶಿವಾಜಿನಗರದ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅವರಿಗೆ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಶಾಸಕ ರೋಷನ್ ಬೇಗ್ ಅವರ ಮಾತು ಹೇಗಿದೆ ಎಂದರೆ ಇನ್ನು ಕೋಳಿಯೇ ಹುಟ್ಟಿಲ್ಲ ಆದರೆ ರೋಷನ್ ಬೇಗ್ ಅದಕ್ಕೂ ಮುಂಚೆಯೇ ಕಬಾಬ್ ಮಾಡಲು ಹೊರಟಿದ್ದಾರೆ. ಅವರಿಗೆ ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ಯಾಕೆ ಇಷ್ಟೊಂದು ಆತುರ? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರನ್ನು ಕಡೆಗಣಿಸಿದೆ ಎಂಬ ಅವರ ಆರೋಪಕ್ಕೆ ಅರ್ಥವಿಲ್ಲ. ಅಲ್ಪಸಂಖ್ಯಾತರು ಅಂದ್ರೆ ಅವರೊಬ್ಬರೆಯೇ ಇರೋದೆ ? ಅವರಿಗೆ ಸಚಿವ ಸ್ಥಾನ ನೀಡದೆ ಇದ್ರೆ ಅದು ಅಲ್ಪಸಂಖ್ಯಾತರಿಗೆ ಮಾಡಿರುವ ಮೋಸವೇ? ಪಕ್ಷದಿಂದ ಬೇರೆಯವರಿಗೆ ಟಿಕೆಟ್ ನೀಡಿದೆ ಅದು ಅಲ್ಪಸಂಖ್ಯಾತರ ಕಡೆಗಣನೆಯೇ? ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ದಿನೇಶ್ ಗುಂಡುರಾವ್ , ರೋಷನ್ ಬೇಗ್ ಅವರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೋಷನ್ ಬೇಗ್ ರಾಜಕಾರಣದಲ್ಲಿ ಪಳಗಿದವರು ಹಿರಿಯರು. ಹೀಗಾಗಿ ಹಿರಿಯರಾಗಿ ಅವರು ಚುನಾವಣೋತ್ತರ ಸಮೀಕ್ಷೆಯನ್ನು ನೋಡಿ ಹೀಗೆ ಅವೇಶಭರಿತರಾಗಿ ರಿಯಾಕ್ಟ್ ಮಾಡೋದಲ್ಲ. ಅವರು ತಾಳ್ಮೆಯಿಂದ ಇದ್ದು ಫಲಿತಾಂಶದ ಬಳಿಕ ಪ್ರತಿಕ್ರಿಯಿಸಿದ್ರೆ ಅರ್ಥವಿತ್ತು ಎಂದು ದಿನೇಶ್ ಗುಂಡೂರಾವ್ ಕಿವಿಮಾತು ಹೇಳಿದ್ದಾರೆ.