ಶಿವಮೊಗ್ಗ, ಫೆ 22 (DaijiworldNews/DB): ಕಾಂಗ್ರೆಸ್ ನಾಯಕರಿಗೆ ಮೋದಿ ಮುಖ ಬಿಟ್ಟರೆ ಬೇರೇನೂ ಕಾಣುವುದಿಲ್ಲ. ನಿದ್ದೆಯಲ್ಲೂ ಅವರಿಗೆ ಮೋದಿಯೇ ಕಾಣುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಮುಖವಾಡ ಕಳಚಿದರೆ ಮೋದಿ ಮುಖ ಕಾಣುತ್ತದೆ ಎಂಬ ಕಾಂಗ್ರೆಸ್ ಮುಖಂಡ ಸುರ್ಜೇವಾಲ ಹೇಳಿಕೆಗೆ ಶಿವಮೊಗ್ಗದಲ್ಲಿ ತಿರುಗೇಟು ನೀಡಿದ ಅವರು, ಜೆಡಿಎಸ್ನ್ನು ಬಿಜೆಪಿಯ ಬಿ ಟೀಂ ಎಂದು ಹೇಳುವ ಕಾಂಗ್ರೆಸ್ಸಿಗರಿಗೆ ಜನ ಯಾವ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತೇ ಇದೆ. ಆಪರೇಷನ್ ಕಮಲದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ನಿಮ್ಮ ಪ್ರತಿಪಕ್ಷ ನಾಯಕ ಪಡೆದ ಸುಪಾರಿ ಎಷ್ಟೆಂಬ ಬಗ್ಗೆ ಸುರ್ಜೇವಾಲ ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ಸವಾಲೆಸೆದರು.
ರಾಮನಗರದಲ್ಲಿ ಹೋಮ ನಡೆಯುತ್ತಿದ್ದ ಜಾಗಕ್ಕೆ ಅಶ್ವತ್ಥ ನಾರಾಯಣ ಹೋಗಿಲ್ಲ. ಅಲ್ಲಿ ಹೋಗದೆ ನೇರವಾಗಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿರುವರ ಕ್ರಮವಾಗಲೀ, ಅಲ್ಲಿ ಅವರು ನಡೆದುಕೊಂಡ ರೀತಿಯಾಗಲೀ ಅಕ್ಷಮ್ಯ ಎಂದರು.
ವಿಜಯೇಂದ್ರ ಮಂಡ್ಯದಲ್ಲಿ ಮನೆ ಅಲ್ಲ, ಅರಮನೆಯೇ ಕಟ್ಟಲಿ. ಶಿವಮೊಗ್ಗದಂತೆ ಇಲ್ಲಿಯೂ ವಿದ್ಯಾಸಂಸ್ಥೆ ಕಟ್ಟಲಿ ನಾವೇನು ಬೇಡ ಅಂದಿದ್ದೇವೆಯೇ? ಅದರಿಂದ ನಮಗೆ ಯಾವ ತೊಂದರೆಯೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.