ಚಾಮರಾಜನಗರ, ಫೆ 22 (DaijiworldNews/DB): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ ಸಂಬಂಧಿಸಿ ಡಿ.ಕೆ. ಶಿವಕುಮಾರ್ ಮಾಡಿದ ಆರೋಪಗಳಿಗೆ ಈಗಾಗಲೇ ಸದನದಲ್ಲಿ ಉತ್ತರಿಸಿದ್ದೇನೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಏನೇನು ಮಾತನಾಡುತ್ತಾರೆಯೋ ಮಾತನಾಡಲಿ. ಕೋವಿಡ್ ಫೈಲ್ಸ್ ಎಂಬುದಾಗಿ ಅವರು ಸಿನಿಮಾ ಮಾಡುತ್ತಾರಂತೆ. ಮಾಡಲಿ ನೋಡೋಣ. ಕೊರೊನಾ ಸಮಯದಲ್ಲಿ ಇಂತಹವರೆಲ್ಲಾ ಇರಬಾರದೆಂದು ದೇವರಿಗೂ ಗೊತ್ತಿತ್ತು. ಅದಕ್ಕಾಗಿಯೇ ಅವರನ್ನು ದೇವರು ಅಧಿಕಾರದಿಂದ ದೂರ ಇಟ್ಟಿದ್ದರು ಎಂದು ಟಾಂಗ್ ನೀಡಿದರು.
2021ರ ಮೇ 2ರ ರಾತ್ರಿ 10.30ರಿಂದ ಬೆಳಗಿನ ಜಾವ 2.30 ನಡುವೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ವೆಂಟಿಲೇಟರ್, ಐಸಿಯುವಿನಲ್ಲಿದ್ದ ಹಲವು ರೋಗಿಗಳು ಸಾವನ್ನಪ್ಪಿದ್ದರು. ಇನ್ನು ಮೈಸೂರಿನಿಂದ ಈ ಆಸ್ಪತ್ರೆಗೆ ಸಕಾಲದಲ್ಲಿ ಆಕ್ಸಿಜನ್ ಪೂರೈಕೆಯಾಗದೆ ಘಟನೆ ಸಂಭವಿಸಿತ್ತು ಎನ್ನಲಾಗಿದ್ದು, ಘಟನೆಗೆ ಚಾಮರಾಜನಗರ ಜಿಲ್ಲಾಧಿಕಾರಿ ರವಿ ಅವರ ವೈಫಲ್ಯ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಆಕ್ಸಿಜನ್ ಪೂರೈಕೆಗೆ ಆಗಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ತಡೆ ಒಡ್ಡಿದ್ದರು ಎಂಬ ಆರೋಪವೂ ಇತ್ತು.