ಬೆಂಗಳೂರು, ಫೆ 21 (DaijiworldNews/DB): ಗೃಹ ಇಲಾಖೆ ನಡೆಸಲು ಆರಗ ಜ್ಞಾನೇಂದ್ರ ಸಮರ್ಥರೇ ಆದಲ್ಲಿ ನನ್ನನ್ನು ಟಿಪ್ಪುವಿನಂತೆ ಹೊಡೆದು ಹಾಕಲು ಹೇಳಿದ ಸಚಿವ ಅಶ್ವತ್ಥ ನಾರಾಯಣ ವಿರುದ್ದ ಪ್ರಕರಣ ದಾಖಲಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.
ಸದನದಲ್ಲಿ ಮಂಗಳವಾರ ಮಾತನಾಡಿದ ಅವರು, ಹೊಡಿ, ಬಡಿ ಎಂಬುದಾಗಿ ಯಾವ ಧರ್ಮವೂ ಹೇಳುವುದಿಲ್ಲ. ಅದಕ್ಕೆ ನಾನು ಬಗ್ಗುವುದೂ ಇಲ್ಲ. ಆರಗ ಜ್ಞಾನೇಂದ್ರ ಅವರು ಒಳ್ಳೆಯರಾದರೂ, ಗೃಹ ಇಲಾಖೆ ನಡೆಸಲು ಸಮರ್ಥರಾದವರಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ನಾನು ಸಮರ್ಥನಾಗಿಯೇ ಇದ್ದೇನೆ. ನಿಮ್ಮ ಸರ್ಕಾರ ಇದ್ದ ಅವಧಿಗಿಂತ ತುಂಬಾ ಉತ್ತಮವಾಗಿ ಈಗ ನನ್ನ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು. ಆಗ ನೀವು ಸಮರ್ಥರೇ ಆದಲ್ಲಿ ಅಶ್ವತ್ಥ ನಾರಾಯಣ ವಿರುದ್ದ ಪ್ರಕರಣ ದಾಖಲಿಸಿ ಎಂದು ಸಿದ್ದು ಸವಾಲು ಹಾಕಿದರು.
ನಿಮಗೆ ಧಮ್ ಇದ್ದರೆ ನನ್ನನನ್ನು ಹೊಡೆದು ಹಾಕಿ ನೋಡೋಣ ಎಂದ ಸಿದ್ದರಾಮಯ್ಯ, ಬಾಯಲ್ಲಿ ಹೇಳುವುದು ಸುಲಭ. ಆದರೆ ವಾಸ್ತವ ಸುಲಭವಲ್ಲ ಎಂದರು.