ನವದೆಹಲಿ, ಫೆ 21 (DaijiworldNews/DB): ವಾಸ್ತವಿಕ ನಿಯಂತ್ರಣ ರೇಖೆಗೆ ಭಾರತೀಯ ಸೇನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಕಳುಹಿಸಿದ್ದಾರೆಯೇ ಹೊರತು ವಯನಾಡ್ ಸಂಸದರಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು ತವಾಂಗ್ ವಿವಾದದ ಬಗೆಗಿನ ಚರ್ಚೆಯಲ್ಲಿ ವಿಳಂಬ ಅನುಸರಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪದ ಬೆನ್ನಲ್ಲೇ ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ಮಧ್ಯೆಯೂ ಭಾರತ ಚೀನಾಕ್ಕೆ ತಕ್ಕ ತಿರುಗೇಟು ನೀಡಲು ಸಿದ್ದವಾಗಿದೆ. ಎಲ್ಎಸಿಗೆ ಸೇನಾಬಲವನ್ನು ಹೆಚ್ಚು ಮಾಡಲಾಗಿದೆ. ಸೇನೆಯನ್ನು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿರುವುದು ಪ್ರಧಾನಿ ಮೋದಿಯವರು. ರಾಹುಲ್ ಗಾಂಧಿಯವರಲ್ಲ ಎಂದರು.
ಚೀನಾ ವಿಷಯದಲ್ಲಿ ನಾವೆಲ್ಲೂ ಹೊಂದಾಣಿಕೆ ಮಾಡಿಲ್ಲ. ಎಲ್ಎಸಿಯಲ್ಲಿ ನಿಯೋಜನೆಗೊಂಡಿರುವ ಸೇನೆಯ ಸಂಖ್ಯೆ ಇತಿಹಾಸದಲ್ಲೇ ಬಲು ದೊಡ್ಡದು. ಇದಕ್ಕೆ ವಿನಿಯೋಗಿಸಿರುವ ಶ್ರಮವೂ ಸಣ್ಣದಲ್ಲ. ಗಡಿಯಲ್ಲಿ ಐದು ಪಟ್ಟು ಮೂಲ ಸೌಕರ್ಯವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ರಕ್ಷಣಾತ್ಮಕ ಹಾಗೂ ಹೊಂದಾಣಿಕೆಯ ವ್ಯಕ್ತಿ ಯಾರೆಂದು ನೀವೇ ಹೇಳಿ. ಸತ್ಯವನ್ನು ನಿಜವಾಗಲೂ ಹೇಳುತ್ತಿರುವುದು ಯಾರು ಮತ್ತು ಇತಿಹಾಸದೊಂದಿಗೆ ಆಟವಾಡುತ್ತಿರುವುದು ಯಾರೆಂದು ನೀವೇ ಹೇಳಬೇಕು ಎಂದು ಸವಾಲು ಹಾಕಿದರು.