ನವದೆಹಲಿ, ಫೆ 21 (DaijiworldNews/DB): ಪ್ರತಿಪಕ್ಷಗಳೆಲ್ಲವೂ ಒಂದಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೆ ಬಿಜೆಪಿಯನ್ನು ಸೋಲಿಸುವುದು ಅಸಾಧ್ಯವಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇಟಲಿಯ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ಖಂಡಿತವಾಗಿಯೂ ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸಲು ಸಾಧ್ಯವಿದೆ. ಇದಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳೆಲ್ಲವೂ ಒಟ್ಟಾಗಬೇಕು ಎಂದರು.
ಭಾರತ ಜೋಡೋ ಯಾತ್ರೆ ತಪಸ್ಸಿನಂತಿತ್ತು. ಅದೊಂದು ವಿಶಿಷ್ಟ ಅನುಭವ. ನಮ್ಮನ್ನು ನಮ್ಮೊಳಗೆ ನೋಡಿಕೊಂಡು ಇನ್ನಷ್ಟು ವಿಸ್ತರಿಸಿಕೊಳ್ಳಲು ಇದೊಂದು ಅವಕಾಶ. ಭಾರತದ ವಿಶಿಷ್ಟ ಶಕ್ತಿಯನ್ನು ಈ ಯಾತ್ರೆ ತಿಳಿಸಿಕೊಟ್ಟಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಧ್ಯಮಗಳು ಸುದ್ದಿ ಹರಡಿಸುವ ರೀತಿಯಲ್ಲಿ ಹಿಂದೂ-ಮುಸ್ಲಿಂ ಧ್ರುವೀಕರಣ ಇಲ್ಲ. ಕೋವಿಡ್ ನಂತರ ಬಡತನ, ಅನಕ್ಷರತೆ, ಹಣದುಬ್ಬರ, ವ್ಯಾಪಾರ ನಷ್ಟ, ಕೃಷಿ ಏರುಪೇರು ಹೆಚ್ಚಿದೆ. ಇವೆಲ್ಲದರಿಂದ ಜನರನ್ನು ಬೇರೆಡೆ ಸೆಳೆಯುವ ತಂತ್ರವಾಗಿ ಈ ಧ್ರುವೀಕರಣದಂತಹ ಚಟುವಟಿಕೆಗಳನ್ನು ಬಳಸಲಾಗುತ್ತಿದೆ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯೇ ಕುಸಿದಿದೆ. ಸಂಸತ್ತಿನಲ್ಲಿ ಮಾತನಾಡಲು ಎರಡು ವರ್ಷ ನನಗೆ ಅವಕಾಶವೇ ಸಿಕ್ಕಿರಲಿಲ್ಲ. ಮೈಕ್ರೋಫೋನ್ನ್ನು ಸ್ಥಗಿತಗೊಳಿಸಿ ನಾನು ಮಾತನಾಡುವುದಕ್ಕೆ ತಡೆ ಒಡ್ಡಲಾಗುತ್ತಿತ್ತು. ಮುಕ್ತವಾಗಿಲ್ಲದ ನ್ಯಾಯಾಂಗ ವ್ಯವಸ್ಥೆ, ಸ್ವತಂತ್ರ ಕಾರ್ಯನಿರ್ವಹಣೆ ತೋರದ ಮಾಧ್ಯಮ ಎಲ್ಲವೂ ಕೇಂದ್ರೀಕೃತವಾಗಿಯೇ ಇವೆ ಎಂದರು.