ಭೋಪಾಲ್, ಫೆ 21 (DaijiworldNews/DB): ಸ್ವಯಂ ಘೋಷಿತ ದೇವಮಾನವವೊಬ್ಬರ ಸಹೋದರ ಮದುವೆ ಮನೆಗೆ ಬಂದ ಅತಿಥಿಗಳಿಗೆ ಪಿಸ್ತೂಲ್ನಿಂದ ಜೀವ ಬೇದರಿಕೆ ಒಡ್ಡಿದ ಘಟನೆ ಭೋಪಾಲ್ನಲ್ಲಿ ನಡೆದಿದೆ.
ನನಗೆ ಬೆಂಬಲ ನೀಡಿದರೆ ನಿಮಗೆ ಹಿಂದೂ ರಾಷ್ಟ್ರ ನೀಡುತ್ತೇನೆಂದು ಕೆಲ ದಿನಗಳ ಹಿಂದೆ ಹೇಳಿ ಸುದ್ದಿಯಲ್ಲಿದ್ದ ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯ ಭಗವಾನ್ ಹನುಮಾನ್ ದೇವಸ್ಥಾನ ಬಾಗೇಶ್ವರ ಧಾಮದ ಯುವ ಪೀಠಾಧೀಶ್ವರ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಕಿರಿಯ ಸಹೋದರ, 26 ವರ್ಷದ ಸೌರಭ್ ಅಲಿಯಾಸ್ ಶಾಲಿಗ್ರಾಮ್ ಅವರೇ ಅತಿಥಿಗಳಿಗೆ ಬೆದರಿಕೆ ಒಡ್ಡಿದವರು.
ಛತ್ತರ್ಪುರ ಜಿಲ್ಲೆಯ ಬಮಿತಾ ಪೊಲೀಸ್ ಠಾಣೆ ವ್ಯಾಪ್ತಿಯ ಗರ್ಹಾ ಗ್ರಾಮದಲ್ಲಿ ಫೆಬ್ರವರಿ 11ರಂದು ನಡೆದ ದಲಿತ ದಂಪತಿಗಳಾದ ಆಕಾಶ್ ಮತ್ತು ಸೀತಾ ಅಹಿರ್ವಾರ್ ಅವರ ಮದುವೆ ಸಮಾರಂಭದಲ್ಲಿ ಘಟನೆ ನಡೆದಿದೆ. ಮದುವೆ ನಡೆಯುತ್ತಿರುವಾಗಲೇ ಅಲ್ಲಿಗೆ ತೆರಳಿದ ಈತ ಕುಡಿದ ಅಮಲಿನಲ್ಲಿ ದೇಶೀಯ ನಿರ್ಮಿತ ಪಿಸ್ತೂಲನ್ನು ಅತಿಥಿಗಳಿಗೆ ತೋರಿಸಿ ಬೆದರಿಕೆಯೊಡ್ಡಿದ್ದಾನೆ. ಒಂದು ಕೈಯಲ್ಲಿ ಬಂದೂಕು, ಇನ್ನೊಂದು ಕೈಯಲ್ಲಿ ಸಿಗರೇಟ್ ಹಿಡಿದು ಈತ ಬೆದರಿಕೆ ಹಾಕಿದ್ದಾನೆ.
ಈತ ಬೆದರಿಕೆ ಒಡ್ಡುವ ವೇಳೆ ಅತಿಥಿಗಳು ಊಟ ಮಾಡುತ್ತಿದ್ದರು. ಈ ವೇಳೆ ತನ್ನ ಸಹಚರರೊಂದಿಗೆ ತೆರಳಿ ಆತ ಗಲಾಟೆ ಎಬ್ಬಿಸಿದ್ದಾನೆ. ಸದ್ಯ ಛತ್ತರ್ಪುರ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.