ರಾಮನಗರ, ಫೆ 21 (DaijiworldNews/DB): ಹಾರೋಹಳ್ಳಿ ನೂತನ ತಾಲೂಕು ಉದ್ಘಾಟನಾ ವೇದಿಕೆಯು ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಹಾಗೂ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ನಡುವಿನ ವಾಕ್ಸಮರಕ್ಕೆ ಸಾಕ್ಷಿಯಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಮೊದಲು ಭಾಷಣ ಮಾಡಿದ ಸಚಿವ ಅಶ್ವತ್ಥ ನಾರಾಯಣ, ಬಿಜೆಪಿ ಸರ್ಕಾರವು ಈ ತಾಲೂಕು ರಚನೆಗೆ ಸಾಕಷ್ಟು ಶ್ರಮ ಪಟ್ಟಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ತಾಲೂಕು ರಚನೆಗೆ ತಾತ್ವಿಕ ಅನುಮೋದನೆ ನೀಡಿದ್ದರು. ಆದರೆ ಬಿಜೆಪಿ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದ್ದಲ್ಲದೆ, ಹುದ್ದೆಗಳಿಗೆ ನೇಮಕಾತಿಯನ್ನೂ ಮಾಡಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ರಾಮನಗರ ಜಿಲ್ಲೆ ಹೆಚ್ಚಿನ ಅಭಿವೃದ್ದಿ ಕಂಡಿದೆ ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ಅನಿತಾ ಕುಮಾರಸ್ವಾಮಿ, ನಾನು ಈ ತಾಲೂಕು ರಚನೆಗೆ ಶ್ರಮಿಸಿರುವುದು. ಅಲ್ಲದೆ ಕುಮಾರಸ್ವಾಮಿಯವರು ಶಾಸಕರಾದ ಮೇಲೆಯೇ ಈ ಜಿಲ್ಲೆ ಅಭಿವೃದ್ದಿ ಕಂಡಿರುವುದು ಎಂಬುದು ಎಲ್ಲರಿಗೂ ತಿಳಿದ ವಿಚಾರ ಎನ್ನುತ್ತಾ ಕೆಲವು ದಾಖಲೆಗಳನ್ನು ಪ್ರದರ್ಶಿಸಿದರು.
ಮಾತು ಮುಂದುವರಿಸಿದ ಅಶ್ವತ್ಥ ನಾರಾಯಣ, 450ಕೋಟಿ ರೂ. ವೆಚ್ಚದಲ್ಲಿ ರಾಮನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ ಎಂದರು. ಈ ವೇಳೆ ದಲಿತ ಮುಖಂಡರು ಕೇಳಿದ ಪ್ರಶ್ನೆಗೆ ಉತ್ತರಿಸದೆ ಸಚಿವರು ಹೊರ ನಡೆದ ಪ್ರಸಂಗವೂ ನಡೆಯಿತು. ನೂತನ ತಾಲೂಕು ಹಾರೋಹಳ್ಳಿ ಅಭಿವೃದ್ದಿಗೆ ಮೀಸಲಿಟ್ಟಿರುವ ಹಣದ ಮೊತ್ತವೆಷ್ಟು ಎಂದು ದಲಿತ ಮುಖಂಡರು ಸಚಿವರನ್ನು ಪ್ರಶ್ನಿಸಿದರು. ಆದರೆ ಇದಕ್ಕೆ ಉತ್ತರಿಸದೇ ಅಶ್ವತ್ಥ ನಾರಾಯಣ ತೆರಳಿದರು.
ಸಂಸದ ಡಿಕೆ ಸುರೇಶ್, ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ, ಕನಕಪುರ ಶಾಸಕ ಡಿಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಗೈರಾಗಿದ್ದರು.