ನವದೆಹಲಿ, ಫೆ 21 (DaijiworldNews/DB): ಶಿವಸೇನೆಯ ಮೂಲ ಚಿಹ್ನೆ ಮತ್ತು ಹೆಸರನ್ನು ಏಕನಾಥ ಶಿಂಧೆ ನೇತೃತ್ವದ ಬಣಕ್ಕೆ ನೀಡಿರುವ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಉದ್ದವ್ ಠಾಕ್ರೆ ಬಣ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ವಿಚಾರಣೆ ನಡೆಸಲಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಪಿ ಎಸ್ ನರಸಿಂಹ ಅವರ ಪೀಠದ ಮುಂಭಾಗ ಮಂಗಳವಾರ ಠಾಕ್ರೆ ಬಣದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿದರು.
ಶಿವಸೇನೆಯ ಮೂಲ ಚಿಹ್ನೆಯಾದ ಬಿಲ್ಲು ಬಾಣ ಹಾಗೂ ಹೆಸರನ್ನು ಚುನಾವಣಾ ಆಯೋಗವು ಶಿಂಧೆ ಬಣಕ್ಕೆ ನೀಡಿದೆ. ಈ ಆದೇಶವನ್ನು ತಡೆ ಹಿಡಿಯದೇ ಇದ್ದಲ್ಲಿ ಅವರು ಚಿಹ್ನೆ ಹಾಗೂ ಬ್ಯಾಂಕ್ ಖಾತೆಗಳನ್ನು ತಮ್ಮ ಸ್ವಾಧೀನಕ್ಕೆ ವಹಿಸಿಕೊಳ್ಳುತ್ತಾರೆ. ಹೀಗಾಗಿ ಸಂವಿಧಾನ ಪೀಠದ ಮುಂದೆ ಇದನ್ನು ನಾಳೆ ಪಟ್ಟಿ ಮಾಡಬೇಕು ಎಂದು ಕಪಿಲ್ ಸಿಬಲ್ ಮನವಿ ಮಾಡಿದರು. ಹೀಗಾಗಿ ಬುಧವಾರ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ.
ಏಕನಾಥ ಶಿಂಧೆ ನೇತೃತ್ವದ ಬಣವನ್ನು ಕಳೆದ ಶುಕ್ರವಾರವಷ್ಟೇ ಚುನಾವಣಾ ಆಯೋಗವು ನಿಜವಾದ ಶಿವಸೇನೆ ಎಂದು ಘೋಷಣೆ ಮಾಡಿತ್ತು. ಅಲ್ಲದೆ ಪಕ್ಷದ ಮೂಲ ಚಿಹ್ನೆಯಾದ ಬಿಲ್ಲು ಬಾಣ ಹಾಗೂ ಹೆಸರನ್ನು ಏಕನಾಥ ಶಿಂಧೆ ಬಣಕ್ಕೆ ನೀಡಿ ಆದೇಶಿಸಿತ್ತು. ಇದರಿಂದ ಆಕ್ರೋಶಗೊಂಡ ಉದ್ದವ್ ಠಾಕ್ರೆ ಆಯೋಗದ ನಿರ್ಧಾರವನ್ನು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಜರೆದಿದ್ದರು. ಅಲ್ಲದೆ, ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.