ನವದೆಹಲಿ, ಫೆ 21 (DaijiworldNews/DB): ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ ಯುಪಿಐ ಮತ್ತು ಸಿಂಗಾಪುರದ ಪೇ ನೌ ಮಧ್ಯದ ಗಡಿಯಾಚೆಗಿನ ಸಂಪರ್ಕವನ್ನು ಇಂದು ಅನಾವರಣಗೊಳಿಸಲಾಯಿತು.
ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಸಿಂಗಾಪುರದ ಹಣಕಾಸು ಪ್ರಾಧಿಕಾರದ ಎಂಡಿ ರವಿ ಮೆನನ್ ಅವರು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಭಯ ದೇಶಗಳ ಜನರಿಗೆ ಈ ಪಾವತಿ ಸಂಪರ್ಕ ವ್ಯವಸ್ಥೆಯಿಂದಾಗಿ ಹೆಚ್ಚಿನ ಅನುಕೂಲವಾಗಲಿದೆ. ವೇಗ ಮತ್ತು ಪರಿಣಾಮಕಾರಿ ಹಣದ ರವಾನೆ ಸಾಧ್ಯವಾಗಲಿದೆ. ಸಿಂಗಾಪುರದಲ್ಲಿ ನೆಲೆಸಿರುವ ಭಾರೀತಿಯರಿಗೆ, ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಈ ವ್ಯವಸ್ಥೆ ಹೆಚ್ಚು ಸಹಕಾರಿಯಾಗಲಿದೆ. ತ್ವರಿತವಾಗಿ, ಕಡಿಮೆ ವೆಚ್ಚದಲ್ಲಿ ಹಣ ವರ್ಗಾವಣೆ ಸಾಧ್ಯವಾಗಲಿದೆ ಎಂದು ವರದಿಯಾಗಿದೆ.
ಭಾರತ ಮತ್ತು ಸಿಂಗಾಪುರ ನಡುವೆ ಯುಪಿಐ-ಪೇ ನೌ ಸಂಪರ್ಕಕ್ಕಾಗಿ ಎರಡೂ ದೇಶಗಳ ಜನರು ಕಾಯುತ್ತಿದ್ದರು. ಇದೀಗ ಅವರಿಗೆ ಉಡುಗೊರೆಯಾಗಿ ಈ ವ್ಯವಸ್ಥೆ ಲಭ್ಯವಾಗಿದೆ. ಎರಡೂ ದೇಶಗಳ ಜನರಿಗೆ ನಾನು ಅಭಿನಂದನೆ ತಿಳಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.