ಬೆಂಗಳೂರು, ಫೆ 21 (DaijiworldNews/DB): ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಬಾರದು. ಸಾಮಾಜಿಕ ಜಾಲತಾಣಗಳನ್ನು ಬಳಸುವಂತಿಲ್ಲ. ಬೀದಿ ರಂಪಾಟದಲ್ಲಿ ತೊಡಗದೆ ಬಾಯ್ಮುಚ್ಚಿಕೊಂಡು ಸುಮ್ಮನಿರಬೇಕು ಎಂದು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ರವಿವಾರ ರೂಪಾ ಅವರು ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಬಳಿಕ ಆರಂಭವಾದ ಇವರಿಬ್ಬ ನಡುವಿನ ಬಹಿರಂಗ ಗುದ್ದಾಟದ ವಿಚಾರವಾಗಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸೂಚನೆ ಮೇರೆಗೆ ವಂದಿತಾ ಶರ್ಮಾ ಇಬ್ಬರು ಅಧಿಕಾರಿಗಳಿಗೆ ಈ ಎಚ್ಚರಿಕೆ ನೀಡಿದ್ದಾರೆ. ಇಬ್ಬರನ್ನೂ ಕರೆಸಿ ವಿವರಣೆ ಪಡೆದಿದ್ದಾರೆ.
ಸಾಮಾಜಿಕ ಜಾಲತಾಣಗಳನ್ನು ಇಬ್ಬರೂ ಬಳಸುವಂತಿಲ್ಲ. ಅಲ್ಲದೆ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಬಾರದು. ಇಬ್ಬರೂ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಈ ರೀತಿಯಾಗಿ ಬೀದಿ ರಂಪಾಟದಲ್ಲಿ ತೊಡಗದೆ ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕೆಂದು ತಾಕೀತು ಮಾಡಿದ್ದಾರೆ.
ಇಬ್ಬರಿಗೂ ನೋಟಿಸ್
ಅಲ್ಲದೆ ಇದೀಗ ಸಿಎಂ ಸೂಚನೆ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ. ಸಿಬಂದಿ ಮತ್ತು ಆಡಳಿತಾ ಸುಧಾರಣಾ ಇಲಾಖೆಯಿಂದ ನೋಟಿಸ್ ಜಾರಿಯಾಗಿದ್ದು, ಇನ್ನೊಬ್ಬ ಸರ್ಕಾರಿ ಅಧಿಕಾರಿಗಳನ್ನು ಜರೆಯಲು ಮಾಧ್ಯಮಗಳನ್ನು ಬಳಕೆ ಮಾಡಿರುವ ನಿಮ್ಮ ನಡವಳಿಕೆಯಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ. ಅಖಿಲ ಭಾರತ ಸೇವಾ ನಿಯಮಗಳ ಸ್ಪಷ್ಟ ಉಲ್ಲಂಘನೆ ಇದು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಇಬ್ಬರೂ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಯವರ ಭೇಟಿಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿ ಆರೋಪ-ಪ್ರತ್ಯಾರೋಪಗಳನ್ನೇ ನಡೆಸಿದರು. ಈ ವಿಚಾರ ಇಲ್ಲಿಗೇ ಬಿಡುವುದಿಲ್ಲ, ಆಕೆ ಬೇಗ ಚೇತರಿಸಿಕೊಳ್ಳಲಿ ಎಂದು ರೋಹಿಣಿ ಹೇಳಿದರೆ, ಇದಕ್ಕೆ ಗರಂ ಆದ ರೂಪಾ ರೋಹಿಣಿ ಅವರ ಡಿಲೀಟೆಡ್ ಫೋಟೋ ಸ್ಕ್ರೀನ್ಶಾಟ್ನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಮತ್ತೆ ವಿವಾದ ಸೃಷ್ಟಿಸಿದರು.
ರಜೆ ಮೇಲೆ ಕಳುಹಿಸಲು ಚರ್ಚೆ
ಇನ್ನು ಐಎಎಸ್-ಐಪಿಎಸ್ ಅಧಿಕಾರಿಗಳಿಬ್ಬರ ಬೀದಿ ರಂಪಾಟದ ಕುರಿತು ಸಚಿವ ಸಂಪುಟದಲ್ಲಿಯೂ ಚರ್ಚೆ ನಡೆಸಿದ್ದು, ರೋಹಿಣಿ, ರೂಪಾ ಹಾಗೂ ಮೌನೀಶ್ ಮೌದ್ಗೀಲ್ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸುವ ಬಗ್ಗೆ ಆಗ್ರಹ ಕೇಳಿ ಬಂದಿದೆ. ಸಚಿವ ಎಸ್.ಟಿ. ಸೋಮಶೇಖರ್ ಸಹಿತ ಹಲವರು ಈ ಆಗ್ರಹ ಮಂಡಿಸಿದ್ದಾರೆ. ಇನ್ನು ಯಾವುದೇ ಹುದ್ದೆ ತೋರಿಸದೇ ಮೂವರನ್ನೂ ವರ್ಗಾವಣೆ ಮಾಡುವಂತೆಯೂ ಕೆಲವು ಸಚಿವರು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರಿಗೂ ಅಖಿಲ ಭಾರತ ಸೇವಾ ನಿಯಮದ ಪ್ರಕಾರ ನಡೆದುಕೊಳ್ಳಿ ಎಂದು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಲಹೆ ನೀಡಲು ಮೋದಿ, ಶಾಗೆ ಜಗ್ಗೇಶ್ ಮನವಿ
ಇನ್ನು ಐಎಎಸ್-ಐಪಿಎಸ್ ಅಧಿಕಾರಿಗಳಿಬ್ಬರ ಗಲಾಟೆ ವಿಚಾರವಾಗಿ ಮಾತನಾಡಿರುವ ರಾಜ್ಯಸಭಾ ಸದಸ್ಯ ಜಗ್ಗೇಶ್, ಇಬ್ಬರೂ ಸಾರ್ವಜನಿಕ ಘನತೆ ಕಾಪಾಡಿಕೊಳ್ಳಬೇಕು. ಇದಕ್ಕೆ ಅವರಿಗೆ ಸಲಹೆ ನೀಡಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಐಎಎಸ್ ಮತ್ತು ಐಪಿಎಸ್ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿಯುತ ಹುದ್ದೆಗಳಾಗಿವೆ. ಸರ್ಕಾರಕ್ಕೆ ಸೇತುವೆ ರೀತಿ ಕಾರ್ಯನಿರ್ವಹಿಸಬೇಕು. ಮಾಧ್ಯಮಗಳಲ್ಲಿ ವೈಯಕ್ತಿಯ ಪ್ರತಿಕಾರ ಮಾಡಬಾರದು ಎಂದಿದ್ದಾರೆ.
ಡಿ.ರೂಪಾ ಮತ್ತು ರೋಹಿಣಿ ಸಿಂಧೂರಿ ಸೇರಿದಂತೆ ಐಎಎಸ್ ಅಧಿಕಾರಿಗಳು ಸಾರ್ವಜನಿಕವಾಗಿ ಯಾವ ರೀತಿ ಘಟನೆಯನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಸಲಹೆ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಕೋರಿದ್ದಾರೆ.