ಬೆಂಗಳೂರು, ಫೆ 20 (DaijiworldNews/MS): ಉನ್ನತ ಮಟ್ಟದ ಇಬ್ಬರು ಸರ್ಕಾರಿ ಅಧಿಕಾರಿಗಳ ಜಟಾಪಟಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸಿಎಂ ಸೂಚಿಸಿದ ಬೆನ್ನಲ್ಲೇ ರೋಹಿಣಿ ಸಿಂಧೂರಿ ಮುಖ್ಯ ಕಾರ್ಯದರ್ಶಿ ವಂದನಾ ಶರ್ಮಾರನ್ನು ಭೇಟಿ ಮಾಡಿದ್ದಾರೆ.
ಡಿಜಿ ಪ್ರವೀಣ್ ಸೂದ್ ಜತೆಯೂ ಮಾತುಕತೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ. ಇನ್ನು ಪತ್ನಿ ತೇಜೋವಧೆಗೆ ರೂಪಾ ಯತ್ನಿಸಿರುವುದಾಗಿ ಆರೋಪಿಸಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಬೆಂಗಳೂರಿನ ಬಾಗಲಕುಂಟೆ ಠಾಣೆಗೆ ತೆರಳಿದ್ದಾರೆ.
ಹಿಂದೆ ಪತ್ನಿ ಸಿಂಧೂರಿ ವಿರುದ್ಧ ಹಲವು ಆರೋಪಗಳು ಕೇಳಿ ಬಂದಾಗಲೂ ಸುಮ್ಮನಿದ್ದ ಸುಧೀರ್ ಈಗ ಠಾಣೆ ಮೆಟ್ಟಿಲೇರಿರುವುದು ಗಮನಾರ್ಹ. ಇದಕ್ಕೂ ಮೊದಲು ಸುಧೀರ್ ರೂಪ ವಿರುದ್ಧ ಮಾಧ್ಯಮದ ಎದುರು ವಾಗ್ದಾಳಿ ನಡೆಸಿದ್ದರು. ಈ ನಡುವೆ ಕರಕುಶಲ ನಿಗಮದ ಎಂಡಿ ಆಗಿರುವ ಸಿಂಧೂರಿ ಇಂದು ಕಚೇರಿಗೆ ತೆರಳಿದ್ದಾರೆ.
ಒಟ್ಟಾರೆ ಇಬ್ಬರು ಅಧಿಕಾರಿಗಳ ಬೀದಿ ಜಗಳ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.