ಮುಂಬೈ, ಫೆ 19 (DaijiworldNews/DB): ಶಿವಸೇನೆಯ ಮೂಲ ಹೆಸರು ಮತ್ತು ಬಿಲ್ಲು ಬಾಣದ ಚಿಹ್ನೆಗಾಗಿ 2 ಸಾವಿರ ಕೋಟಿ ರೂ.ಗಳಿಗೂ ಮಿಕ್ಕಿ ಹಣಕಾಸಿನ ಡೀಲ್ ನಡೆದಿದೆ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣದ) ಸಂಸದ ಹಾಗೂ ವಕ್ತಾರ ಸಂಜಯ್ ರಾವತ್ ಆರೋಪಿಸಿದ್ದಾರೆ.
ಮುಂಬೈಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2 ಸಾವಿರ ಕೋಟಿ ರೂ.ಗಳಿಗೂ ಅಧಿಕ ಡೀಲ್ ನಡೆದಿರುವುದು ನೂರು ಪ್ರತಿಶತಃ ನಿಖರ ಮಾಹಿತಿಯಾಗಿದೆ. ಈ ಬಗ್ಗೆ ನನಗೆ ದೃಢವಾದ ಮಾಹಿತಿ ಲಭ್ಯವಾಗಿದೆ. ಕೇವಲ ಪ್ರಾಥಮಿಕ ಅಂಕಿ ಅಂಶ ಅಲ್ಲ ಎಂದರು.
ಇದೇ ವೇಳೆ ಸರಣಿ ಟ್ವೀಟ್ ಮಾಡಿರುವ ಅವರು, ದೇಶದ ಇತಿಹಾಸದಲ್ಲೇ ಇಂತಹ ಸಂಗತಿಯನ್ನು ಹಿಂದೆಂದೂ ಕೇಳಿಲ್ಲ. ವಿಷಯ ಇಷ್ಟೇ ಅಲ್ಲ. ಇನ್ನೂ ಇದೆ. ಶೀಘ್ರ ಎಲ್ಲವನ್ನೂ ಬಹಿರಂಗಪಡಿಸಲಾಗುವುದು ಎಂದು ಬರೆದುಕೊಂಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಕೇಂದ್ರ ಚುನಾವಣಾ ಆಯೋಗವು ಮೂಲ ಶಿವಸೇನಾದ ಹೆಸರು ಮತ್ತು ಬಿಲ್ಲು ಬಾಣದ ಚಿಹ್ನೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಕ್ಕೆ ನೀಡಿ ತನ್ನ ನಿರ್ಧಾರ ಪ್ರಕಟಿಸಿತ್ತು. ಇದಾದ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗದ ನಿರ್ಧಾರದ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಿಎಂ ಉದ್ದವ್ ಠಾಕ್ರೆ ಅವರು ಆಯೋಗದ ನಿರ್ಧಾರಕ್ಕೆ ತಡೆ ನೀಡುವಂತೆ ಸುಪ್ರೀಂ ಕದ ತಟ್ಟಲು ಮುಂದಾಗಿದ್ದಾರೆ.