ನವದೆಹಲಿ, ಫೆ 19 (DaijiworldNews/DB): ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚೀತಾಗಳನ್ನು ತಂದಿರುವುದರಿಂದ ಭಾರತದ ಜೀವ ವೈವಿಧ್ಯದ ಉತ್ತೇಜನಕ್ಕೆ ಪುಷ್ಠಿ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಫೆಬ್ರುವರಿ 18ರಂದು ಮಾಡಿರುವ ಟ್ವೀಟ್ಗೆ ಭಾನುವಾರ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಚೀತಾಗಳ ಆಗಮನದಿಂದ ಭಾರತದ ಜೀವ ವೈವಿಧ್ಯತೆ ಉತ್ತೇಜನಗೊಳ್ಳುತ್ತದೆ. ಎಂದಿದ್ದಾರೆ.
ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಶನಿವಾರ 12 ಚಿರತೆಗಳನ್ನು ಬಿಡುಗಡೆ ಮಾಡಲಾಗಿದೆ. ಆ ಮೂಲಕ ಪ್ರಧಾನಿ ಮೋದಿ ನೇತೃತ್ವದಲ್ಲಿ ಆರಂಭಗೊಂಡ ಚೀತಾ ಯೋಜನೆಯು ಇನ್ನೊಂದು ಮೈಲಿಗಲ್ಲು ತಲುಪಿದೆ. ಮಧ್ಯ ಪ್ರದೇಶದ ಸಿಎಂ ಶಿವರಾಜ್ ಚೌಹಾಣ್ ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಸಮ್ಮುಖದಲ್ಲಿ ಈ ಚಿರತೆಗಳನ್ನು ಉದ್ಯಾನವನಕ್ಕೆ ಬಿಡಲಾಗಿದೆ ಎಂದು ಯಾದವ್ ಅವರು ನಿನ್ನೆ ಟ್ವೀಟ್ ಮಾಡಿದ್ದರು.
ನಮೀಬಿಯಾದಿಂದ ಕಳೆದ ಸೆಪ್ಟೆಂಬರ್ 17ರಂದು 8 ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿತ್ತು. ಇದೀಗ ಮತ್ತೆ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ತರುವ ಮೂಲಕ ಈ ಉದ್ಯಾನವನದಲ್ಲಿ ಚೀತಾಗಳ ಒಟ್ಟು ಸಂಖ್ಯೆ 20 ಆಗಿದೆ.