ಬೆಂಗಳೂರು, ಫೆ 19 (DaijiworldNes/HR): ಇನ್ನೆರಡು ದಿನಗಳಲ್ಲಿ ನಾರಾಯಣಗುರು ನಿಗಮ ರಚನೆ ಘೋಷಣೆ ಮಾಡುತ್ತೇನೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಾರಾಯಣ ಗುರು ನಿಗಮ ವಿಚಾರದಲ್ಲಿ ಯಾರಿಗೂ ಯಾವುದೇ ಆತಂಕ ಬೇಡ. ಇನ್ನೆರಡು ದಿನಗಳಲ್ಲಿ ನಿಗಮ ಘೋಷಿಸುತ್ತೇವೆ. ಜವಬ್ದಾರಿ ನನ್ನದು ಎಂದು ಹೇಳಿದ್ದಾರೆ.
ಇನ್ನು ಬಿಲ್ಲವ ಸಮುದಾಯವು ವರ್ಷಗಳಿಂದ ನಿರಂತರವಾಗಿ ನಿಗಮ ಮಂಡಳಿಗೆ ಬೇಡಿಕೆ ಇಟ್ಟಿದ್ದು, ಕೆಲವು ದಿನಗಳ ಹಿಂದೆ ಇಂಧನ ಸಚಿವ ಸುನೀಲ್ ಕುಮಾರ್ ನೇತೃತ್ವದಲ್ಲಿ ನಿಯೋಗ ತೆರಳಿತ್ತು. ಬಿಲ್ಲವ ಸಮುದಾಯದ ನಾಯಕರ ಜೊತೆ ನಿಯೋಗ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು.
ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ನಾರಾಯಣ ಗುರು ನಿಗಮ ಮಂಡಳಿ ಘೋಷಣೆ ನಿರೀಕ್ಷೆಯಲ್ಲಿದ್ದ ಸಮುದಾಯ ಆದರೆ ಬಜೆಟ್ ನಲ್ಲಿ ಘೋಷಣೆಯಾಗದ ಹಿನ್ನಲೆಯಲ್ಲಿ ಬಿಲ್ಲವ ಸಮುದಾಯದ ಸಚಿವರಿಗೆ ಹೆಚ್ಚಿದ ಒತ್ತಡ ಹಾಕಿದ್ದು, ಇದೀಗ ಟ್ವೀಟ್ ಮೂಲಕ ಭರವಸೆ ನೀಡಿದ್ದಾರೆ.