ಬೆಂಗಳೂರು, ಫೆ 19 (DaijiworldNews/DB): ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರರೊಬ್ಬರು ಜೀವನ ಪ್ರಮಾಣಪತ್ರ ನೀಡಿಲ್ಲವೆಂದು ಪಿಂಚಣಿ ತಡೆ ಹಿಡಿದಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರು ಮಲ್ಲೇಶ್ವರಂ ನಿವಾಸಿ ಶತಾಯುಷಿ ಎಚ್.ನಾಗಭೂಷಣ ರಾವ್ (102) ಅವರಿಗೆ ತಂತ್ರ ಸೈನಿಕ ಸಮ್ಮಾನ್ ಗೌರವ ಧನ (ಗೌರವ ಪಿಂಚಣಿ) ಬರುವುದನ್ನು 2017-2018ನೇ ಸಾಲಿನ ಜೀವಿತ ಪ್ರಮಾಣ ಪತ್ರ ಸಲ್ಲಿಸದ ಕಾರಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು 2017ರ ನವೆಂಬರ್ನಲ್ಲಿ ಪಿಂಚಣಿ ಬರುವುದನ್ನು ತಡೆ ಹಿಡಿದಿದ್ದರು. ಆದರೆ ಅವರು ಜೀವಿತ ಪ್ರಮಾಣ ಪತ್ರ ಸಲ್ಲಿಸಿದ ಬಳಿಕವೂ ಬಾಕಿ ಉಳಿಸಿಕೊಂಡಿರುವ 3.71 ಲಕ್ಷ ರೂಪಾಯಿಯನ್ನು ಮರು ಪಾವತಿ ಮಾಡಿರಲಿಲ್ಲ. ಈ ಸಂಬಂಧ ನ್ಯಾಯಾಲಯಕ್ಕೆ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಪಿಂಚಣಿ ತಡೆ ಹಿಡಿದಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಇಳಿ ವಯಸ್ಸಿನಲ್ಲಿ ಕೋರ್ಟ್ಗೆ ಅಲೆಯುವಂತೆ ಮಾಡಿದ್ದಕ್ಕೆ ಈ ದಂಡ ವಿಧಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
2018ರ ಡಿಸೆಂಬರ್ 24ರಿಂದ ಇಲ್ಲಿವರೆಗೆ ಶೇ. 6 ಬಡ್ಡಿಯೊಂದಿಗೆ 3.71 ಲಕ್ಷ ರೂ. ಬಾಕಿ ಪಿಂಚಣಿಯನ್ನು ಎರಡು ವಾರಗಳೊಳಗಾಗಿ ಅರ್ಜಿದಾರರಿಗೆ ಪಾವತಿಸಬೇಕು. ಅಲ್ಲದೆ ದಂಡದ ಮೊತ್ತವನ್ನೂ ಎರಡು ವಾರದೊಳಗೆ ಅರ್ಜಿದಾರರಿಗೆ ಪಾವತಿಸಬೇಕು ತಪ್ಪಿದಲ್ಲಿ ವಾರ್ಷಿಕ ಶೇ.18 ಬಡ್ಡಿಯೊಂದಿಗೆ ಪಾವತಿ ಮಾಡಬೇಕಾಗುತ್ತದೆ ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
2020ರಲ್ಲಿ ಅರ್ಜಿದಾರರು ಮೊದಲ ಬಾರಿಗೆ ಅರ್ಜಿ ಸಲ್ಲಿಸಿದಾಗ ಎರಡು ವಾರಗಳಲ್ಲಿ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಕೋರ್ಟ್ ಸೂಚಿಸಿತ್ತು. ಆದರೆ ಇದರಿಂದ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ಮತ್ತು ಬಾಕಿ ಪಾವತಿ ಮಾಡುವಂತೆ ಅರ್ಜಿ ಸಲ್ಲಿಸಿದ್ದರು.