ನವದೆಹಲಿ, ಫೆ 19 (DaijiworldNews/DB): ದೆಹಲಿ ಮದ್ಯ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಡೆಯಬೇಕಿದ್ದ ತಮ್ಮ ವಿಚಾರಣೆಯನ್ನು ಮುಂದೂಡುವಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕೇಂದ್ರೀಯ ತನಿಖಾ ದಳಕ್ಕೆ ಮನವಿ ಮಾಡಿದ್ದಾರೆ.
ದೆಹಲಿಯ ಹಣಕಾಸು ಸಚಿವರೂ ಆಗಿರುವ ತಮಗೆ ಬಜೆಟ್ ತಯಾರಿ ಕೆಲಸ ಇರುವುದರಿಂದ ವಿಚಾರಣೆಗೆ ಹಾಜರಾಗಲು ಅಸಾಧ್ಯವಾಗಿದೆ. ಹೀಗಾಗಿ ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದಾರೆ ಎಂದು ವರದಿಯಾಗಿದೆ.
ಬಜೆಟ್ ಸಿದ್ದಪಡಿಸುವುದು ನನಗೆ ಬಹಳ ಮುಖ್ಯವಾಗಿದೆ. ಹೀಗಾಗಿ ವಿಚಾರಣೆಯ ದಿನಾಂಕವನ್ನು ಮುಂದೂಡುವಂತೆ ಕೋರಿದ್ದೇನೆ. ಫೆಬ್ರವರಿ ತಿಂಗಳಾಂತ್ಯದೊಳಗೆ ಸಿಬಿಐ ಕಚೇರಿಗೆ ಭೇಟಿ ಮಾಡುತ್ತೇನೆ ಎಂದು ಸಿಸೋಡಿಯಾ ತಿಳಿಸಿದ್ದಾರೆ.
ಇನ್ನು ಸಿಸೋಡಿಯಾ ಕೋರಿಕೆಯಂತೆ ಸಿಬಿಐ ವಿಚಾರಣೆಯನ್ನು ಮುಂದೂಡಲಿದೆ ಎಂದು ತಿಳಿದು ಬಂದಿದೆ. ಸಿಬಿಐ ಇನ್ನೊಮ್ಮೆ ವಿಚಾರಣೆಗೆ ಕರೆದಿದ್ದು, ಸಂಪೂರ್ಣ ಸಹಕಾರ ನೀಡುವುದಾಗಿ ನಿನ್ನೆಯಷ್ಟೇ ಸಿಸೋಡಿಯಾ ಟ್ವೀಟ್ ಮಾಡಿದ್ದರು.