ವಾರಾಣಸಿ, ಫೆ 18 (DaijiworldNews/DB): ರಾಹುಲ್ ಗಾಂಧಿ ಅವರಿದ್ದ ವಿಮಾನವನ್ನು ಇಳಿಸಲು ವಾರಣಾಸಿಯಲ್ಲಿ ವಿಮಾನ ನಿಲ್ದಾಣ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ ಎಂದು ಹೇಳಿಕೆ ನೀಡಿದ ಕಾಂಗ್ರೆಸ್ ಮುಖಂಡ ಅಜಯ್ ರೈ ವಿರುದ್ದ ಫುಲ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಜಯ್ ರೈ ಸುಳ್ಳು ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಕುರಿತು ಶನಿವಾರ ಮಾಹಿತಿ ನೀಡಿರುವ ಪೊಲೀಸರು, ಬಬತ್ಪುರ ವಿಮಾನ ನಿಲ್ದಾಣದ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಪಾಠಕ್ ಅವರ ಹೇಳಿಕೆ ಆಧರಿಸಿ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.
ರಾಹುಲ್ ಗಾಂಧಿಯವರ ವಿಮಾನ ಮಂಗಳವಾರ ಬರಲಿದೆ ಎಂಬ ಮಾಹಿತಿ ಇತ್ತು. ಆದರೆ ಕೇರಳದ ಕಣ್ಣೂರಿನಿಂದ ದೆಹಲಿಗೆ ಹೋಗಲಿದೆ ಎಂಬುದಾಗಿ ಕಿನ್ನೌರ್ನ ಏರ್ ಟ್ರಾಫಿಕ್ ಕಂಟ್ರೋಲರ್ ಸಂದೇಶ ಸ್ವೀಕರಿಸಿದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಅವರ ವಿಮಾನಕ್ಕೆ ಲ್ಯಾಂಡಿಂಗ್ಗೆ ನಿರಾಕರಣೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಪ್ರಕರಣ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿರುವ ಅಜಯ್ ರೈ, ಇದಕ್ಕೆ ಬಿಜೆಪಿ ಸರ್ಕಾರದ ಒತ್ತಡವೇ ಕಾರಣ ಎಂದು ಆರೋಪಿಸಿದ್ದಾರೆ.ಪ್ರಕರಣ ದಾಖಲಾಗಿರುವುದಕ್ಕೆ ನಾನು ಹೆದರುವುದಿಲ್ಲ. ಬಿಜೆಪಿ ಸರ್ಕಾರ ಒತ್ತಡ ಹೇರಿದ್ದರಿಂದಲೇ ಪ್ರಕರಣ ದಾಖಲಾಗಿದೆ. ಆ ಪಕ್ಷದ ಮುಖವಾಡವನ್ನು ಕಳಚಿಡುವುದು ತುರ್ತು ಅಗತ್ಯವಾಗಿದೆ ಎಂದು ಹೇಳಿದ್ದಾರೆ.