ಹಾಸನ, ಫೆ 18 (DaijiworldNews/DB): ಕಾಡ್ಗಿಚ್ಚಿಗೆ ಸಿಲುಕಿ ಬೆಂಕಿಯಲ್ಲಿ ಬೆಂದು ಹೋಗಿದ್ದ ಫಾರೆಸ್ಟ್ ಗಾರ್ಡ್ವೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಸಕಲೇಶಪುರದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸುಂದರೇಶ್ ಸಾವನ್ನಪ್ಪಿದವರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಶುಕ್ರವಾರ ರಾತ್ರಿಮೃತಪಟ್ಟರು. ಇಂದು ಹಾಸನದಲ್ಲಿ ಅರಣ್ಯ ಇಲಾಖೆ ವತಿಯಿಂದ ಗೌರವಾರ್ಪಣೆ ಬಳಿಕ ಮೃದೇಹವನ್ನು ಹುಟ್ಟೂರಿಗೆ ಸ್ಥಳಾಂತರಿಸಿ ಬಳಿಕ ಹುಟ್ಟೂರಿನಲ್ಲಿ ಸುಂದರೇಶ್ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಏನಿದು ಘಟನೆ?
ಕಾಡುಮನೆ ಎಸ್ಟೇಟ್ ಸಮೀಪದಲ್ಲಿ ಫೆಬ್ರವರಿ 16ರ ಗುರುವಾರ ಮಧ್ಯಾಹ್ನ ಕಾಣಿಸಿಕೊಂಡಿದ್ದ ಕಾಡ್ಗಿಚ್ಚು ನಂದಿಸಲು ಡಿಆರ್ಎಫ್ಓ ಮಂಜುನಾಥ್ ನೇತೃತ್ವದಲ್ಲಿ ಆರು ಮಂದಿ ಸಿಬಂದಿ ತೆರಳಿದ್ದರು. ಈ ವೇಳೆ ಬೆಂಕಿ ವೇಗವಾಗಿ ಹಬ್ಬಿದ್ದು, ಸಿಬಂದಿ ಬೆಂಕಿಯ ಮಧ್ಯೆ ಸಿಲುಕಿಕೊಂಡಿದ್ದರು. ಡಿಆರ್ಎಫ್ಓ ಮಂಜುನಾಥ, ಫಾರೆಸ್ಟ್ ಗಾರ್ಡ್ ಸುಂದರೇಶ್, ವಾಚರ್ಗಳಾದ ತುಂಗೇಶ್ ಮತ್ತು ಮಹೇಶ್ ಘಟನೆಯಿಂದ ಗಾಯಗೊಂಡಿದ್ದರು. ಆದರೆ ಸುಂದರೇಶ್ ಮತ್ತು ಮಂಜುನಾಥ್ ಬಹುತೇಕ ಬೆಂದು ಹೋಗಿದ್ದರು.
ಘಟನಾ ಸ್ಥಳಕ್ಕೆ ರಸ್ತೆ ಸಂಪರ್ಕ ಇಲ್ಲದ ಕಾರಣ ಗಾಯಾಳುಗಳನ್ನು ಅಡ್ಡೆಯಲ್ಲಿ ಹೊತ್ತು ಹಾಸನದ ಆಸ್ಪತ್ರೆಗೆ ತರಲಾಗಿತ್ತು. ಬಳಿಕ ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಸುಂದರೇಶ್ ದೇಹದಲ್ಲಿ ಶೇ. 80ರಷ್ಟು ಸುಟ್ಟ ಗಾಯಗಳಾಗಿದ್ದರಿಂದ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದರು. ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಇನ್ನು ಸುಂದರೇಶ್ ಸಾವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಸುಂದರೇಶ್ ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಸುಂದರೇಶ್ ಅವರ ಧೈರ್ಯ ಮತ್ತು ಸಾಹಸಗಳನ್ನು ಸದಾ ಸ್ಮರಿಸಲಾಗುವುದು ಎಂದಿದ್ದಾರೆ.