ಬೆಂಗಳೂರು, ಫೆ 18 (DaijiworldNews/DB): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಸರ್ಕಾರ ರಚಿಸುವುದು ನಿಶ್ಚಿತ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಯನ್ನು ಸೋಲಿಸಿ ಚುನಾವಣೆ ಗೆಲ್ಲಲು ಎಲ್ಲಾ ವಿಪಕ್ಷಗಳು ಒಟ್ಟಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಪಕ್ಷ ಪ್ರಧಾನ ಪಾತ್ರ ವಹಿಸಲಿದೆ. ಆದರೆ ವಿಧಾನಸಭಾ ಚುನಾವಣೆಗಳನ್ನು ಸಶಕ್ತವಾಗಿ ಎದುರಿಸಲು ತಯಾರಾಗಬೇಕು. ಕರ್ನಾಟಕ ವಿಧಾನಸಭಾ ಚುನಾವಣೆ ನಿಟ್ಟಿನಲ್ಲಿ ಕಾಂಗ್ರೆಸ್ ಉತ್ತಮ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಚುನಾವಣೆ ಗೆಲ್ಲುವುದು ನಿಶ್ಚಿತ ಎಂದರು.
ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸದ ಹೊರತು ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಮೈತ್ರಿಗೆ ಗೆಲುವು ಸಿಗುವುದು ಸುಲಭವಲ್ಲ. ಹೀಗಾಗಿ ಕರ್ನಾಟಕ, ರಾಜಸ್ಥಾನ, ಛತ್ತೀಸ್ಘಡ, ಮಧ್ಯಪ್ರದೇಶಗಳಲ್ಲಿ ಚುನಾವಣೆ ಸನಿಹದಲ್ಲಿರುವುದರಿಂದ ಈ ರಾಜ್ಯಗಳಲ್ಲಿ ಗೆಲ್ಲಲು ಪಕ್ಷ ತಯಾರಾಗಬೇಕು ಎಂದವರು ಹೇಳಿದರು.
ಹಿಮಾಚಲದಲ್ಲಿ ನಮ್ಮ ಗೆಲುವಿನ ಓಟ ಶುರುವಾಗಿದೆ. ಈಶಾನ್ಯದಲ್ಲಿ ಗೆಲುವು ನಮ್ಮದಾಗಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಗೆಲುವು ನಮ್ಮದೇ ಎಂದು ಅವರು ಪ್ರತಿಪಾದಿಸಿದರು.
ಕರ್ನಾಟಕದ ಜನತೆ ಧ್ರುವೀಕರಣದ ರಾಜಕೀಯಕ್ಕೆ ಒಳಗಾಗುವುದಿಲ್ಲ ಎಂಬ ನಂಬಿಕೆ ಇದೆ. ನಾವು ಕೇವಲ ಸರ್ಕಾರ ರಚಿಸುವುದಲ್ಲ, ಬಹುಮತ ಪಡೆದ ಏಕೈಕ ಪಕ್ಷವಾಗಿ ರೂಪುಗೊಳ್ಳುತ್ತೇವೆ. ಕರ್ನಾಟಕದ ಜನರ ಸರ್ಕಾರವಾಗಿ ಕಾಂಗ್ರೆಸ್ ಸರ್ಕಾರ ಕೆಲಸ ಮಾಡಲಿದೆ ಎಂದರು.
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಗೆಹ್ಲೋಟ್ ಮತ್ತು ತಮ್ಮ ನಡುವಿನ ಮುಸುಕಿನ ಗುದ್ದಾಟದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು. ರಾಜಸ್ಥಾನದಲ್ಲಿ ಚುನಾವಣೆ ಗೆಲ್ಲಲು ಬೇಕಾದ ಸಲಹೆಗಳನ್ನು ನೀಡಿದ್ದೇನೆ. ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನೂ ಎಐಸಿಸಿ ಮತ್ತು ಕಾಂಗ್ರೆಸ್ ನಾಯಕತ್ವ ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುತ್ತದೆ ಎಂದಷ್ಟೇ ಹೇಳಿದರು.