ನವದೆಹಲಿ, ಫೆ 18 (DaijiworldNews/DB): ಕೇಂದ್ರ ಬಿಜೆಪಿ ಸರ್ಕಾರದ ದಮನಕಾರಿ ನೀತಿಗಳಿಂದಾಗಿ ನರೇಗಾ ಯೋಜನೆ ಬಲಿಯಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಪಾದಿಸಿದ್ದಾರೆ.
ಫೇಸ್ಬುಕ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸರ್ಕಾರ ತನ್ನ ಬಜೆಟ್ನಲ್ಲಿ ಅನುದಾನ ಕಡಿತಗೊಳಿಸಿದೆ. ಆ ಮೂಲಕ ಕೇಂದ್ರದ ದಮನಕಾರಿ ನೀತಿಗಳಿಗೆ ಇಂತಹ ಉತ್ತಮ ಯೋಜನೆಯೊಂದನ್ನು ಬಲಿ ಮಾಡಿದೆ ಎಂದು ಕಿಡಿ ಕಾರಿದ್ದಾರೆ.
ಗ್ರಾಮೀಣ ಆರ್ಥಿಕತೆಯ ಅಡಿಪಾಯ ನರೇಗಾ ಯೋಜನೆ. ಹಲವಾರು ಕುಟುಂಬಗಳು ಇದರಿಂದ ಪ್ರಯೋಜನ ಪಡೆದಿವೆ. ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದೆ. ಅಂತಹ ಯೋಜನೆಗೆ ಕೇಂದ್ರ ಅನುದಾನ ಕಡಿತಗೊಳಿಸಿರುವುದು ಅಕ್ಷಮ್ಯ ಎಂದರು.
ನರೇಗಾ ಯೋಜನೆಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿದರೆ ಗ್ರಾಮೀಣ ಭಾಗದ ಶೇ. 57ರಷ್ಟು ಮಂದಿಯ ಜೀವನೋಪಾಯಕ್ಕೆ ತೊಂದರೆಯಾಗಲಿದೆ. ದೈನಂದಿನ ದುಡಿಮೆಯನ್ನೇ ನಂಬಿ ಬದುಕಿರುವ ಕಾರ್ಮಿಕರು ಇದರಿಂದ ಕಂಗಾಲಾಗಲಿದ್ದಾರೆ ಎಂದು ರಾಹುಲ್ ಬರೆದುಕೊಂಡಿದ್ದಾರೆ.
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ನರೇಗಾ ಯೋಜನೆಗೆ ಅನುದಾನ ಕಡಿತಗೊಳಿಸಿರುವುದಕ್ಕೆ ಕಿಡಿ ಕಾರಿದ್ದಾರೆ. ನರೇಗಾ ಯೋಜನೆಗೆ ಕೊನೆ ಹಾಡಬೇಡಿ. ಹಾಗೊಂದು ವೇಳೆ ಮಾಡಿದ್ದೇ ಆದಲ್ಲಿ ಪ್ರಧಾನಿಯವರನ್ನು ಜನ ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.