ಮುಂಬೈ, ಫೆ 18 (DaijiworldNews/DB): ಶಿವಸೇನಾ ಪಕ್ಷದ ಚಿಹ್ನೆ ಮತ್ತು ಹೆಸರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪಾಲಾಗಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದಿದ್ದಾರೆ.
ಶಿವಸೇನೆಯಲ್ಲಿ ಬಂಡಾಯವೆದ್ದು ಶಿಂಧೆ ಅವರು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ ಎಂಟು ತಿಂಗಳ ಬಳಿಕ ಪಕ್ಷದ ಚಿಹ್ನೆ ಮತ್ತು ಹೆಸರನ್ನು ಚುನಾವಣಾ ಆಯೋಗವು ಶಿಂಧೆ ಬಣಕ್ಕೆ ನೀಡಿದ ವಿಚಾರವಾಗಿ ಕಿಡಿ ಕಾರಿರುವ ಅವರು, ಶಿವಸೇನೆಯ ಚಿಹ್ನೆ ಬಿಲ್ಲು ಬಾಣವನ್ನು ಅವರು ಕಳ್ಳತನ ಮಾಡಿದ್ದಾರೆ. ದೇಶದ್ರೋಹಿಯೊಬ್ಬ ಯಾವಾಗಲೂ ದೇಶದ್ರೋಹಿಯಾಗಿಯೇ ಇರುತ್ತಾನೆ. ಕ್ಷಣಿಕ ಖುಷಿ ಅವರು ಅನುಭವಿಸಬಹುದು. ಭರವಸೆ ಕಳೆದುಕೊಳ್ಳದೆ ನಾವು ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಪ್ರಜಾಪ್ರಭುತ್ವಕ್ಕೆ ಈ ನಿರ್ಧಾರ ಮಾರಕವಾಗಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಇದು. ಪ್ರಜಾಪ್ರಭುತ್ವ ಸಾವನ್ನಪ್ಪಿದೆ ಎಂಬುದಾಗಿ ಪ್ರಧಾನಿ ಮೋದಿಯವರು ಇನ್ನು ಕೆಂಪು ಕೋಟೆಯಲ್ಲಿ ನಿಂತು ಹೇಳಬಹುದು ಎಂದು ಲೇವಡಿ ಮಾಡಿದರು.
ಇನ್ನು ಶಿವಸೇನೆ ಉದ್ದವ್ ಠಾಕ್ರೆ ಬಣದ ಮುಖಂಡ ಸಂಜಯ್ ರಾವತ್ ಮಾತನಾಡಿ, ಚುನಾವಣಾ ಆಯೋಗ ಬಿಜೆಪಿಯ ಏಜೆಂಟ್ನಂತೆ ಕೆಲಸ ಮಾಡುತ್ತಿದೆ ಎಂದು ಜರೆದಿದ್ದಾರೆ. ಪಕ್ಷದ ಚಿಹ್ನೆ ವಿಚಾರದ ವಿವಾದವು ಸುಪ್ರೀಂಕೋರ್ಟ್ನಲ್ಲಿ ವಿಚಾರಣಾ ಹಂತದಲ್ಲಿರುವಾಗಲೇ ನಿರ್ಧಾರ ಪ್ರಕಟಿಸಿರುವ ಚುನಾವಣಾ ಆಯೋಗದ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ನಾವು ಪ್ರಶ್ನಿಸುತ್ತೇವೆ ಎಂದಿದ್ದಾರೆ.
ಶಿವಸೇನಾ ಹೆಸರು ಮತ್ತು ಬಿಲ್ಲು ಬಾಣದ ಚಿಹ್ನೆಯನ್ನು ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ಶಿಂಧೆ ಬಣಕ್ಕೆ ನೀಡಿತ್ತು. ಉದ್ದವ್ ಠಾಕ್ರೆ ಬಣವು ಶಿವಸೇನಾ ಉದ್ದವ್ ಬಾಳಾ ಸಾಹೇಬ್ ಠಾಕ್ರೆ ಎಂದು ಗುರ್ತಿಸಿಕೊಳ್ಳಬಹದು ಎಂದು ಆಯೋಗ ನಿರ್ದೇಶಿಸಿತ್ತು.