ಬೆಂಗಳೂರು,ಫೆ 17 (DaijiworldNews/MS): ತೆಂಕು ತಿಟ್ಟಿನ ಯಕ್ಷಗಾನದ ಮೇರು ಭಾಗವತ ಹಾಗೂ ಭಾಗವತಿಕೆ ಭೀಷ್ಮ ಎಂದೇ ಖ್ಯಾತರಾದ ಭಾಗವತ ಬಲಿಪ ನಾರಾಯಣ ಭಾಗವತ (85) ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ.
ಬಲಿಪ ನಾರಾಯಣ ನಿಧನ ಸಂಬಂಧ ಟ್ವೀಟ್ ಮಾಡಿರುವ ಬೊಮ್ಮಾಯಿ, 'ತೆಂಕು ತಿಟ್ಟು ಯಕ್ಷರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ಬಲಿಪ ನಾರಾಯಣ ಭಾಗವತರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ತಮ್ಮ ಕಂಚಿನ ಕಂಠದ ಬಲಿಪ ಶೈಲಿಯ ಹಾಡುಗಾರಿಕೆಗೆ ಪ್ರಸಿದ್ಧರಾಗಿದ್ದ ಭಾಗವತರ ನಿಧನದಿಂದ ಯಕ್ಷ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ನೀಡಲೆಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ' ಎಂದು ಸಂತಾಪ ಸೂಚಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ " ಯಕ್ಷರಂಗದ ಭೀಷ್ಮರೆಂದೇ ಖ್ಯಾತರಾದ ಶ್ರೀ ಬಲಿಪ ನಾರಾಯಣ ಭಾಗವತರು ನಿಧನ ಹೊಂದಿದ ಸುದ್ದಿ ಬಹಳ ದುಃಖ ತಂದಿದೆ. ಶ್ರೀಯುತರ ದಿವ್ಯಾತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಸಂತಾಪ ಸೂಚಿಸಿದ್ದಾರೆ.
ಕಳೆದ 15 ದಿನಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಸ್ವಗೃಹದಲ್ಲಿ ನಿಧನರಾದರು.60 ವರ್ಷಗಳ ಕಾಲ ಕಲಾ ಸೇವೆ ಮಾಡಿರುವ ಅವರು ಪ್ರಸಿದ್ಧ ಮೇಳವಾಗಿರುವ ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಪ್ರಧಾನ ಭಾಗವತರಾಗಿದ್ದರು.