ಬೆಂಗಳೂರು, ಫೆ 16 (DaijiworldNews/MS): ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್ ಮಂಡಿಸಲಿದ್ದು ಈ ಕುರಿತು ರಣದೀಪ್ ಸುರ್ಜೇವಾಲ ಟೀಕಿಸಿದ್ದು, " ನಕಲಿ ಬಜೆಟ್ , ಭ್ರಷ್ಟಾಸುರ ಬೊಮ್ಮಾಯಿ" ಎಂದು ಹೇಳಿದ್ದಾರೆ.
ಕಳೆದ ಬಾರಿ ಮಂಡಿಸಿದ ಬಜೆಟ್ ನಲ್ಲಿ ಜನರಿಗೆ ಕೊಟ್ಟ ಭರವಸೆಯನ್ನೇ ಸರ್ಕಾರ ಇದುವರೆಗೆ ಈಡೇರಿಸಿಲ್ಲ. ಈ ಬಾರಿ ಬಜೆಟ್ ಮಂಡಿಸಲು ಹೊರಟಿದ್ದು, ಮತ್ತೆ ಜನರಿಗೆ ಸುಳ್ಳು ಭರವಸೆ ನೀಡಲು ಹೊರಟಿದ್ದಾರೆ. ಹೀಗಾಗಿ ಇದೊಂದು ನಕಲಿ ಬಜೆಟ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿಯನ್ನು ಭ್ರಷ್ಟಾಸುರ ಬೊಮ್ಮಾಯಿ ಎಂದು ಕರೆದ ಅವರು, ಸಾರ್ವಜನಿಕರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ ಎಂದು ಕಿಡಿಕಾರಿದ್ದಾರೆ. ಪ್ರಣಾಳಿಕೆಯ 650 ಭರವಸೆಗಳನ್ನು ಈಡೇರಿಸುವ ಕೆಲಸ ಮಾಡಿಲ್ಲ. ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿ ಅದು ಮಾಡಲಿಲ್ಲ.ಮಹಿಳೆಯರ ಕಲ್ಯಾಣಕ್ಕಾಗಿ ಯಾವುದೇ ಯೋಜನೆ ತಂದಿಲ್ಲ. ಯುವಕರಿಗೆ ರಾಜ್ಯ ಸರ್ಕಾರ ಉದ್ಯೋಗ ನೀಡುವ ಕೆಲಸ ಮಾಡಿಲ್ಲ ಎಂದು ಬಿಜೆಪಿ ವಿರುದ್ಧ ರಣದೀಪ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ.