ನವದೆಹಲಿ, ಜ 17 (DaijiworldNews/DB): ಚೆನ್ನೈಯಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ತುರ್ತು ಬಾಗಿಲನ್ನು ತೆರೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಘಟನೆ ಕುರಿತು ಡಿಜಿಸಿಎ ತನಿಖೆಗೆ ಆದೇಶಿಸಿದೆ.
ಕಳೆದ ವರ್ಷ ಡಿಸೆಂಬರ್ 10ರಂದು ಘಟನೆ ಇಂಡಿಗೋ 6E ಫ್ಲೈಟ್ 6E-7339ರಲ್ಲಿ ನಡೆದಿದ್ದು, ಪ್ರಯಾಣಿಕನ ಕೃತ್ಯದಿಂದಾಗಿ ಇತರ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು ಎಂದು ತಿಳಿದು ಬಂದಿದೆ. ಬಳಿಕ ತಪಾಸಣೆ ನಡೆಸಿ ವಿಮಾನ ಟೇಕಾಫ್ ಆಗಿತ್ತು. ಇನ್ನು ಘಟನೆಯ ಬಗ್ಗೆ ಡಿಜಿಸಿಎಗೆ ದೂರು ಹೋಗಿದ್ದು, ಡಿಜಿಸಿಎ ಘಟನೆ ಕುರಿತು ತನಿಖೆಗೆ ಆದೇಶಿಸಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ವಿಮಾನಗಳಲ್ಲಿ ವಿವಿಧ ಘಟನೆಗಳು ನಡೆಯುತ್ತಿರುವ ಬಗ್ಗೆ ಆಗಾಗ ವರದಿಯಾಗುತ್ತಿದ್ದು, ಇದು ವಿಮಾನ ಪ್ರಯಾಣಿಕರಲ್ಲಿ ಆತಂಕ ಹುಟ್ಟುಹಾಕಲು ಕಾರಣವಾಗಿದೆ.