ನವದೆಹಲಿ, ಜ 17 (DaijiworldNews/DB): ದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.
ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಬಿಎಸ್ವೈ ಜೊತೆ ಪ್ರತ್ಯೇಕವಾಗಿ 15 ನಿಮಿಷ ಕಾಲ ಮಾತುಕತೆ ನಡೆಸಿದ್ದಾರೆ. ಇನ್ನು ಮೋದಿ-ಬಿಎಸ್ವೈ ನಡುವಿನ ಮಾತುಕತೆ ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳ ನಿರೀಕ್ಷೆಗೆ ಕಾರಣವಾಗಿದೆ. ಚುನಾವಣೆ ಸನಿಹದಲ್ಲಿರುವ ನಾಲ್ಕು ರಾಜ್ಯಗಳಿಗೆ ಕಾರ್ಯಕಾರಿಣಿಯಲ್ಲಿ ಒತ್ತು ನೀಡಲಾಗಿದ್ದು, ಕರ್ನಾಟಕದ ಬಗ್ಗೆ ವಿಶೇಷ ಚರ್ಚೆ ನಡೆದಿದೆ ಎನ್ನಲಾಗಿದೆ.
ಸಿಎಂ ಹುದ್ದೆಯಿಂದ ಬಿಎಸ್ವೈ ಅವರನ್ನು ಹೈಕಮಾಂಡ್ ಕೆಳಗಿಳಿಸಿದ ಬಳಿಕ ಪಕ್ಷದ ವೇದಿಕೆಗಳಲ್ಲಿ ಬಿಎಸ್ವೈ ಅಷ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಚುನಾವಣೆ ಸನ್ನಿಹಿತವಾಗುತ್ತಲೇ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಅವರಿಗೆ ಸ್ಥಾನ ನೀಡಲಾಗಿತ್ತು. ಇದೀಗ ನಿನ್ನೆ ಮತ್ತೆ ಪ್ರಧಾನಿ ಮೋದಿಯವರು ಬಿಎಸ್ವೈಯವರೊಂದಿಗೆ ಮಾತುಕತೆ ನಡೆಸಿರುವುದು ರಾಜ್ಯ ಬಿಜೆಪಿಯಲ್ಲಿ ಹಲವು ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಇನ್ನು ಈ ಭೇಟಿ ನಾಲ್ಕು ಬಾರಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಎಸ್ವೈ ಅವರ ರಾಜಕೀಯ ಭವಿಷ್ಯದ ವಿಚಾರದಲ್ಲಿಯೂ ಹೆಚ್ಚು ಪ್ರಸ್ತುತವಾಗಿದೆ ಎನ್ನಲಾಗುತ್ತಿದೆ.
ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಸಿಎಂ ಆದ ಬಸವರಾಜ ಬೊಮ್ಮಾಯಿ ಅವರು ವಿಪಕ್ಷಗಳ ಆರೋಪಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದರು. 40 ಪರ್ಸೆಂಟ್ ಕಮಿಷನ್ ಆರೋಪ, ಪೇಸಿಎಂ ಅಭಿಯಾನಗಳು ಬೊಮ್ಮಾಯಿ ಅವರ ಜನಪ್ರಿಯತೆಗೆ ಅಡ್ಡಿ ಉಂಟಾಗಲು ಕಾರಣವಾಯಿತು. ಆದರೆ ಮುಂದಿನ ಚುನಾವಣೆಯನ್ನು ಬೊಮ್ಮಾಯಿ ನಾಯಕತ್ವದಲ್ಲೇ ಎದುರಿಸುವುದಾಗಿ ಈಗಾಗಲೇ ಹೈಕಮಾಂಡ್ ಸ್ಪಷ್ಟಪಡಿಸಿದೆ.
ಇನ್ನು ಕರ್ನಾಟಕದಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿಗೆ ‘ಮಿಷನ್ 136’ರ ಗುರಿ ನೀಡಿದ್ದಾರೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಕೂಡಾ ತಳಮಟ್ಟದಿಂದಲೇ ಚುನಾವಣೆಗೆ ಸಿದ್ದತೆ ನಡೆಸುತ್ತಿದ್ದು, ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗುತ್ತಿದೆ.