ಬೆಂಗಳೂರು, ಜ 17 (DaijiworldNews/DB): ಪತ್ನಿಯ ಶೀಲ ಶಂಕಿಸಿ ಆಕೆಯ ಹೊಟ್ಟೆಯಲ್ಲಿರುವ ಮಗು ತನ್ನದಲ್ಲ ಎಂದು ಗಲಾಟೆಯೆಬ್ಬಿಸಿ ಪತಿಯೊಬ್ಬ ಪತ್ನಿಯನ್ನು ಕೊಲೆಗೈದು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯ ನಾಜ್ (22) ಕೊಲೆಯಾದ ಗರ್ಭಿಣಿ. ಈಕೆಯ ಪತಿ ನಾಸಿರ್ ಹುಸೇನ್ ಆರೋಪಿಯಾಗಿದ್ದು, ಸದ್ಯ ಪರಾರಿಯಾಗಿದ್ದಾನೆ. ತಾವರೆಕೆರೆಯ ಸುಭಾಷ್ ನಗರದ ಅಪಾರ್ಟ್ಮೆಂಟ್ ಸಮುಚ್ಚಯವೊಂದರ ಫ್ಲ್ಯಾಟ್ನಲ್ಲಿ ದಂಪತಿ ವಾಸವಿದ್ದರು. ಪತ್ನಿ ನಾಜ್ ಗರ್ಭಿಣಿಯಾಗಿದ್ದು, ಇದರಿಂದ ಪತಿ ಕೋಪಗೊಂಡಿದ್ದ. ಅಕ್ರಮ ಸಂಬಂಧದಿಂದ ನೀನು ಗರ್ಭಿಣಿಯಾಗಿದ್ದೀಯಾ, ನಿನ್ನ ಹೊಟ್ಟೆಯಲ್ಲಿರುವ ಮಗು ನನ್ನದಲ್ಲ, ಗರ್ಭಪಾತ ಮಾಡಿಸು ಎಂಬುದಾಗಿ ಖ್ಯಾತೆ ತೆಗೆದಿದ್ದ.
ಇದೇ ಕಾರಣದಿಂದ ದಂಪತಿ ಮಧ್ಯೆ ಭಾನುವಾರ ರಾತ್ರಿಯೂ ಜಗಳ ನಡೆದಿದ್ದು, ಈ ವೇಳೆ ಜಗಳ ತಾರಕಕ್ಕೇರಿ ಪತ್ನಿಯನ್ನು ಆರೋಪಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಸಹೋದರನಿಗೆ ಸಂದೇಶ ಕಳುಹಿಸಿದ್ದ ನಾಸಿರ್ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಕೂಡಲೇ ಮನೆಯವರು ಸ್ಥಳಕ್ಕಾಗಮಿಸಿ ನೋಡಿದಾಗ ನಾಜ್ ಮೃತದೇಹ ಮನೆಯಲ್ಲಿತ್ತು. ಮೃತದೇಹವನ್ನು ಕೂಡಲೇ ಸೇಮಟ್ ಜಾನ್ಸ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಆರೋಪಿ ನಾಸಿರ್ ಅನಾಥನಾಗಿದ್ದು, ತಮ್ಮ ಹೆತ್ತವರನ್ನು ಒಪ್ಪಿಸಿ ನಾಜ್ ಆತನನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಬಳಿಕ ಆರೋಪಿ ಪತ್ನಿಯ ಶೀಲ ಶಂಕಿಸಿ ಗಲಾಟೆ ಎಬ್ಬಿಸುತ್ತಿದ್ದ ಎಂಬುದಾಗಿ ಸಂಬಂಧಿಕರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.