ಶಿವಮೊಗ್ಗ, ಜ 16 (DaijiworldNews/SM): ಇಲ್ಲಿನ ಗೊಂದಿಚಟ್ನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಊಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಊಟ ಸೇವನೆ ಮಾಡಿದ ನಂತರ ಅಸ್ವಸ್ಥಗೊಂಡ ಘಟನೆ ಇಂದು ನಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗದ ತಾಲೂಕಿನ ಗೊಂದಿಚಟ್ನಹಳ್ಳಿಯ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಇವತ್ತು ಮಧ್ಯಾಹ್ನದ ನಂತರ ಒಬ್ಬರ ಬಳಿಕ ಇನ್ನೊಬ್ಬರು ಅಸ್ವಸ್ಥರಾಗಿದ್ಧಾರೆ. ಹೀಗೆ ಒಟ್ಟು 60 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಬಗ್ಗೆ ವರದಿಯಾಗಿದೆ. ಅಸ್ವಸ್ಥರಾದ ಮಕ್ಕಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐದಕ್ಕೂ ಹೆಚ್ಚು ವೈದ್ಯರು ಹಾಗು ಸಿಬ್ಬಂದಿ ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸುತ್ತಿದ್ಧಾರೆ.
ಸುಮಾರು 250ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿರುವ ವಸತಿ ಶಾಲೆಯಲ್ಲಿ ಮಕ್ಕಳು ಊಟವಾದ ಕ್ರಮೇಣ ಅಸ್ವಸ್ಥರಾಗಿದ್ದಾರೆ. ಮಕ್ಕಳಲ್ಲಿ ವಾಂತಿ ಸಮಸ್ಯೆ ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು, ಮಕ್ಕಳ ಆರೋಗ್ಯದ ಬಗ್ಗೆ ಗಮನವಹಿಸಿದ್ಧಾರೆ. ಶಾಲೆಯ ಶಿಕ್ಷಕವೃಂದ ಮೆಗ್ಗಾನ್ನಲ್ಲಿ ಮೊಕ್ಕಾಂ ಹೂಡಿದು ಮಕ್ಕಳ ತಪಾಸಣೆಯಲ್ಲಿ ನೆರವಾಗುತ್ತಿದ್ದಾರೆ.
ಮಧ್ಯಾಹ್ನ ಚಪಾತಿ ಮತ್ತು ಅನ್ನ ಸಾಂಬರು ಊಟದ ಬಳಿಕ ವಿದ್ಯಾರ್ಥಿಗಳಲ್ಲಿ ವಾಂತಿ ಬೇಧಿ ಶುರುವಾಗಿದೆ. ವಾಂತಿ ಬೇಧಿಗೆ ಕಲುಷಿತ ನೀರು ಅಥವಾ ಊಟದ ಸಮಸ್ಯೆ ಇರುವ ಸಾಧ್ಯತೆ ಇದೆ. ಆದರೆ ಘಟನೆಗೆ ನೈಜ ಕಾರಣ ತನಿಖೆ ಪೂರ್ಣಗೊಂಡ ನಂತರವಷ್ಟೇ ತಿಳಿದುಬರಲಿದೆ.