ಕೋಲ್ಕತ್ತಾ, ಜ 16 (DaijiworldNews/DB): ಟಿಎಂಸಿ ಕಾರ್ಯಕರ್ತರು ನಿಮ್ಮ ಮೇಲೆ ದಾಳಿ ನಡೆಸಿದರೆ ಪ್ರತಿಯಾಗಿ ಅವರನ್ನು ಮರಕ್ಕೆ ಕಟ್ಟಿ ಹಾಕಿ ನಾಲ್ಕೈದು ಬಾರಿ ಹೊಡೆಯಿರಿ ಎಂಬುದಾಗಿ ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಹೇಳಿದ್ದಾರೆ. ಇನ್ನು ಚಟರ್ಜಿ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಪಂಚಾಯತ್ ಚುನಾವಣೆಗೂ ಮುನ್ನ ಆಡಳಿತ ಪಕ್ಷದ ಜನಸಂಪರ್ಕ ಅಭಿಯಾನದ ಸಂದರ್ಭದಲ್ಲಿ ಸಮಸ್ಯೆ ಹೇಳಿಕೊಳ್ಳಲು ಹೋದಾಗ ಟಿಎಂಸಿ ಕಾರ್ಯಕರ್ತರು ನನ್ನ ಮೇಲೆ ಹಲ್ಲೆಗೈದಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರಿತ್ತ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಟಿಎಂಸಿ ಕಾರ್ಯಕರ್ತ ಯಾವುದೇ ಜನಸಾಮಾನ್ಯನಿಗೂ ತೊಂದರೆ ಕೊಟ್ಟು, ದಾಳಿ ನಡೆಸಿದರ ಸುಮ್ಮನೆ ಕೂರಬೇಡಿ. ಅವರ ಮೇಲೆ ನೀವೂ ಪ್ರತಿ ದಾಳಿ ನಡೆಸಿ. ನಿಮ್ಮ ಸಮಸ್ಯೆಗಳನ್ನು ಆಲಿಸದಿದ್ದರೆ ಅವರನ್ನು ಮರಕ್ಕೆ ಕಟ್ಟಿ ಹಾಕಿ ನಾಲ್ಕೈದು ಏಟು ಹೊಡೆಯಿರಿ ಎಂದಿದ್ದಾರೆ.
ಇನ್ನು ಬಿಜೆಪಿ ಸಂಸದೆಯ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಆಡಳಿತ ಪಕ್ಷ ಟಿಎಂಸಿ ಆಕ್ರೋಶ ವ್ಯಕ್ತಪಡಿಸಿದೆ.
ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆಗೂ ಮೊದಲು, ಟಿಎಂಸಿ 'ದೀದಿ ಕಾ ಸುರಕ್ಷಾ ಕವಚ' ಎಂಬ ಹೆಸರಿನಲ್ಲಿ ಜನಸಂಪರ್ಕ ಅಭಿಯಾನವನ್ನು ಪ್ರಾರಂಭಿಸಿದೆ. ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂಬುದು ಅಭಿಯಾನದ ಉದ್ದೇಶವಾಗಿದೆ.