ನವದೆಹಲಿ, ಜ 16 (DaijiworldNews/DB): ಇಂದಿನಿಂದ ದೆಹಲಿ ವಿಧಾನಮಂಡಲದ ಮೂರು ದಿನಗಳ ಅಧಿವೇಶನ ಆರಂಭವಾಗಿದೆ. ಮೊದಲ ದಿನವಾದ ಸೋಮವಾರ ಬಿಜೆಪಿ ಶಾಸಕರು ಆಮ್ಲಜನಕದ ಸಿಲಿಂಡರ್ ಹಿಡಿದುಕೊಂಡು ಸದನಕ್ಕೆ ಆಗಮಿಸಿದರು.
ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ದೆಹಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಶಾಸಕರು ಆಮ್ಲಜನಕ ಸಿಲಿಂಡರ್ ಸಹಿತ ಸದನಕ್ಕೆ ಬಂದರು. ಇನ್ನು ಸಿಲಿಂಡರ್ನ್ನು ಸದನದೊಳಗೆ ತಾರದೇ ಹೊರಗಿಟ್ಟು ಬರುವಂತೆ ಸ್ಪೀಕರ್ ರಾಮ ನಿವಾಸ್ ಗೋಯಲ್ ಸೂಚಿಸಿದರು. ಅಲ್ಲದೆ ಬಿಗಿ ಭದ್ರತೆಯಿದ್ದರೂ ಆಮ್ಲಜನಕ ಸಿಲಿಂಡರ್ನ್ನು ಸದನಕ್ಕೆ ತರುವುದಕ್ಕೆ ಅವಕಾಶ ಸಿಕ್ಕಿರುವುದು ಹೇಗೆಂದು ಪ್ರಶ್ನಿಸಿದರು. ಅಲ್ಲದೆ ಭದ್ರತಾ ಲೋಪದಿಂದಾಗಿ ಈ ಘಟನೆ ನಡೆಯಲು ಕಾರಣ ಎಂದು ಪರಿಗಣಿಸಿದ ಸ್ಪೀಕರ್ ಭದ್ರತಾ ಸಿಬಂದಿಯನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಮೊದಲ ದಿನದ ಕಲಾಪದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಸರ್ಕಾರದ ಕಾರ್ಯಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುವ ಬಗ್ಗೆ ಎಎಪಿ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಇದರಿಂದಾಗಿ ಹತ್ತು ನಿಮಿಷ ಕಾಲ ಸದನವನ್ನು ಮುಂದೂಡಲಾಯಿತು. ಮಕ್ಕಳ ಶಿಕ್ಷಣ ಮತ್ತು ಶಿಕ್ಷಕರ ತರಬೇತಿ ವಿಚಾರದಲ್ಲಿ ಅಕ್ರಮ ಹಸ್ತಕ್ಷೇಪ ಮಾಡುವ ಮೂಲಕ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಸಮಸ್ಯೆ ಸೃಷ್ಟಿಸುತ್ತಿದ್ದಾರೆ ಎಂದು ಎಎಪಿ ಶಾಸಕ ಸೌರಭ್ ಭಾರದ್ವಾಜ್ ನಿಲುವಳಿ ಮಂಡಿಸಿದರು.