ಹುಬ್ಬಳ್ಳಿ, ಜ 16 (DaijiworldNews/DB): ಪ್ರಿಯಾಂಕಾರನ್ನು ನಾಯಕಿ ಮಾಡಲು ಕರ್ನಾಟಕದ ಮಹಿಳೆಯರು ಸಿದ್ದರಿಲ್ಲ. ನಾ ನಾಯಕಿ ಎಂಬುದಾಗಿ ಅವರೇ ಸ್ವಘೋಷಣೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿರುವುದು ವಿಪರ್ಯಾಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾ ನಾಯಕಿ ಎಂದರೆ ಏನೆಂಬುದೇ ತಿಳಿಯದಾಗಿದೆ. ಅದು ಸ್ವಯಂ ಘೋಷಣೆಯೇ ಎಂಬುದು ಗೊತ್ತಿಲ್ಲ. ಸ್ವಯಂ ಘೋಷಣೆ ಮಾಡಿಕೊಳ್ಳುವ ಪರಿಸ್ಥಿತಿ ಅವರಿಗೆ ಎದುರಾಗಿರುವುದು ವಿಪರ್ಯಾಸ ಎಂದರು.
ಪ್ರತ್ಯೇಕ ಮಹಿಳಾ ಬಜೆಟ್ ಘೋಷಣೆ ಮಾಡಲು ಕಾಂಗ್ರೆಸ್ನವರಿಗೆ ಅಧಿಕಾರ ಸಿಗುತ್ತದೆಯೇ ಎಂದು ಇದೇ ವೇಳೆ ಸಿಎಂ ಪ್ರಶ್ನಿಸಿದರು.
ಇನ್ನು ಯುವಜನೋತ್ಸವಕ್ಕೆ ವಿನಾಶದ ಉತ್ಸವ ಎಂದು ಟ್ವೀಟ್ ಮಾಡಿದ ಕಾಂಗ್ರೆಸ್ಗೆ ತಿರುಗೇಟು ನೀಡಿದ ಅವರು, ವಿನಾಶ ಕಾಲ ಬಂದಿರುವುದು ಕಾಂಗ್ರೆಸ್ಗೆ. ಅವರಿಗೆ ಈ ಪರಿಸ್ಥಿತಿ ಬಂದಿರುವುದರಿಂದಲೇ ಅಂತಹ ಆಲೋಚನೆಗಳೂ ಬರುತ್ತವೆ. ಯಥಾ ಬುದ್ದಿ ತಥಾ ಮಾತು ಎಂಬಂತಾಗಿದೆ ಅವರ ನಡೆ. ಎಲ್ಲದರಲ್ಲೂ ವಿನಾಶ ಕಾಣುವ ಅವರ ಭಾಷೆ, ನಡವಳಿಕೆ, ಚಿಂತನೆಯೂ ವಿನಾಶದತ್ತಲೇ ಹೋಗುತ್ತಿದೆ ಎಂದರು.
ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಆ ವ್ಯಕ್ತಿಯ ಹಿಂದೆ ಯಾರಿದ್ದಾರೆ, ಯಾಕೆ ಕರೆ ಮಾಡಿದ್ದಾನೆ ಸೇರಿದಂತೆ ಸಮಗ್ರ ಮಾಹಿತಿ ಕಲೆ ಹಾಕಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.