ಪಾಟ್ನಾ, ಜ 16 (DaijiworldNews/DB): ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರ ಬೆಂಗಾವಲು ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರವಿವಾರ ತಡರಾತ್ರಿ ಬಿಹಾರದ ಡುಮರಾಯನ ಮತಿಲಾ-ನಾರಾಯಣಪುರ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಎಸ್ಕಾರ್ಟ್ ನಲ್ಲಿದ್ದ ಸಿಬಂದಿ ಗಾಯಗೊಂಡಿದ್ದಾರೆ.
ಬಕ್ಸಾರ್ನಿಂದ ಪಾಟ್ನಾಕ್ಕೆ ಸಚಿವ ಅಶ್ವಿನಿ ಚೌಬೆ ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಪೊಲೀಸ್ ಜೀಪು ಮತಿಲಾ-ನಾರಾಯಣಪುರ ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಇದರಿಂದ ಪಲ್ಟಿಯಾಗಿ ಸನಿಹದಲ್ಲೇ ಇದ್ದ ಹಳ್ಳಕ್ಕೆ ಉರುಳಿದೆ.
ಕಾರಿನಲ್ಲಿದ್ದ ಪೊಲೀಸರು ಹಾಗೂ ಚಾಲಕನಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆ ನಡೆದ ಕೂಡಲೇ ತಮ್ಮ ಕಾರಿನಿಂದ ಕೆಳಗಿಳಿದು ಬಂದಿರುವ ಸಚಿವರು, ಗಾಯಾಳುಗಳನ್ನು ಆಸ್ಪತ್ರೆಗೆ ಶೀಘ್ರ ದಾಖಲಿಸುವಂತೆ ಉಳಿದ ಸಿಬಂದಿಗೆ ಹೇಳಿದ್ದಾರೆ. ಘಟನೆ ಬಗ್ಗೆ ವೀಡಿಯೋ ಮೂಲಕ ಸಚಿವ ಅಶ್ವಿನಿ ಚೌಬೆ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.