ನವದೆಹಲಿ, ಜ 16 (DaijiworldNews/DB): ಮಾದಕ ವಸ್ತು ಸೇವನೆ ಮಾಡುವ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳಿಬ್ಬರು ಐಸಿಸ್ ಮಾದರಿಯಲ್ಲಿ ಹತ್ಯೆಗೈದು 8 ತುಂಡುಗಳನ್ನಾಗಿ ಮಾಡಿ ಎಸೆದು ವೀಡಿಯೋ ಮಾಡಿ ಲಷ್ಕರ್-ಎ-ತಯ್ಯಬಾ ಭಯೋತ್ಪಾದಕ ಸಂಘಟನೆಯ ನಾಯಕರಿಗೆ ಕಳುಹಿಸಿದ ಆತಂಕಕಾರಿ ಘಟನೆ ದೆಹಲಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಜಗ್ಜಿತ್ ಸಿಂಗ್ (29) ಮತ್ತು ನೌಶಾದ್ (56) ಎಂಬವರೇ ಈ ಕೃತ್ಯ ಎಸಗಿದವರು. ಕಳೆದ ತಿಂಗಳು 15ರಂದು ಕೃತ್ಯ ಎಸಗಿದ್ದು, ಗ್ಯಾಂಗ್ಸ್ಟರ್ ಪ್ರಕರಣದ ತನಿಖೆ ನಡೆಸುವ ವೇಳೆ ಈ ಇಬ್ಬರನ್ನು ಬಂಧಿಸಿ ತನಿಖೆಗೊಳಪಡಿಸಿದಾಗ ಕೊಲೆ ರಹಸ್ಯ ಬಹಿರಂಗಪಡಿಸಿದ್ದಾರೆ.
ಬಂಧಿತರಿಂದ ಪೊಲೀಸರು 3 ಪಿಸ್ತೂಲು, 22 ಗುಂಡುಗಳು, 2 ಹ್ಯಾಂಡ್ ಗ್ರೆನೇಡ್ಗಳನ್ನು ದೆಹಲಿ ಪೊಲೀಸ್ ವಿಶೇಷ ಘಟಕದ ಸಿಬಂದಿ ವಶಪಡಿಸಿಕೊಂಡಿದ್ದಾರೆ. ಇನ್ನು ವ್ಯಕ್ತಿಯ ಶಿರಚ್ಚೇದಗೊಳಿಸಿದಕ್ಕೆ ಲಷ್ಕರ್-ಎ-ತಯ್ಯಬಾ ಜತೆಗೆ ನಿಕಟ ಸಂಪರ್ಕ ಹೊಂದಿರುವ ಸೊಹೈಲ್ ಎಂಬಾತನಿಂದ ಜಗ್ಗ ಮತ್ತು ನೌಶಾದ್ಗೆ 2 ಲಕ್ಷ ರೂ. ಸಂದಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೌಶಾದ್ ವಿರುದ್ದ ಈ ಹಿಂದೆಯೂ ಹಲವು ಕೇಸ್ಗಳು ದಾಖಲಾಗಿದ್ದು, ಹರ್ಕತುಲ್ ಅನ್ಸಾರ್ ಎಂಬ ಉಗ್ರ ಸಂಘಟನೆಯೊಂದಿಗೂ ಸಂಪರ್ಕ ಇರುವುದು ತನಿಖೆಯಿಂದ ಗೊತ್ತಾಗಿದೆ. ಕೆಂಪುಕೋಟೆ ಮೇಲಿನ ದಾಳಿ ಪ್ರಕರಣದಲ್ಲಿ ಜೈಲು ಸೇರಿದ್ದ ಆರಿಫ್ ಮೊಹಮ್ಮದ್ನ ಸಂಪರ್ಕವೂ ಈತನಿಗಿತ್ತು ಎಂದು ತಿಳಿದು ಬಂದಿದೆ.