ಶ್ರೀನಗರ, ಜ 15 (DaijiworldNews/DB): ಜನರ ಸಮಸ್ಯೆ ಬಗೆಹರಿಯಲು ಚುನಾಯಿತ ಸರ್ಕಾರ ಅಗತ್ಯ. ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕು ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಲೆಫ್ಟಿನೆಂಟ್ ಗವರ್ನರ್ ಆಡಳಿತದಿಂದ ಜನರ ಸಮಸ್ಯೆ ಪರಿಹಾರವಾಗದು. ಚುನಾಯಿತ ಸರ್ಕಾರ ಸ್ಥಾಪನೆಯಾದರೆ ಮಾತ್ರ ಇದು ಸಾಧ್ಯ. ಹೀಗಾಗಿ ರಾಜ್ಯದಲ್ಲಿ ಅಗತ್ಯವಾಗಿ ಚುನಾವಣೆ ನಡೆಯಬೇಕು ಎಂದರು.
ಸೋಮವಾರ ಚುನಾವಣಾ ಆಯೋಗ ಸಭೆ ಕರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಭೆ ಕರೆದಿರುವುದು ಸ್ವಾಗತಾರ್ಹ. ನಮ್ಮ ಪಕ್ಷ ಸಭೆಯಲ್ಲಿ ಭಾಗವಹಿಸಿ ನಮ್ಮ ನಿಲುವನ್ನು ವ್ಯಕ್ತಪಡಿಸಲಿದೆ. ಅವರ ನಿಲುವೇನೆಂಬುದನ್ನು ಅವರು ಹೇಳಲಿ, ನಾವು ಆಲಿಸುತ್ತೇವೆ ಎಂದು ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ 2019ರಲ್ಲಿ ರದ್ದುಗೊಳಿಸಿತ್ತು. ಆನಂತರ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂತು.