ರಾಯ್ಪುರ, ಜ 15 (DaijiworldNews/DB): ಗನ್ ಹಿಡಿದು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಆರು ಮಂದಿ ಪೊಲೀಸರ ಮುಂದೆ ಸ್ವ ಇಚ್ಛೆಯಿಂದ ಶರಣಾದ ಬಳಿಕ ಇದೀಗ ಅಧ್ಯಯನದ ಕಡೆಗೆ ಮುಖ ಮಾಡಿದ್ದಾರೆ. ಆ ಮೂಲಕ ಉತ್ತಮ ಭವಿಷ್ಯಕ್ಕಾಗಿ ತಯಾರಿ ನಡೆಸುತ್ತಿದ್ದಾರೆ.
ಛತ್ತೀಸ್ಗಢದಲ್ಲಿ ಗನ್ ಹಿಡಿದು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಕರಣ್ ಹೇಮ್ಲಾ ಸಹಿತ ಆರು ಮಂದಿ ಇದೀಗ ಪೆನ್ನು ಹಿಡಿದು10 ನೇ ತರಗತಿ ಪರೀಕ್ಷೆ ಬರೆಯಲು ಸಿದ್ದರಾಗುತ್ತಿದ್ದಾರೆ. 2019 ಮತ್ತು 2021 ರ ನಡುವೆ ಹೇಮ್ಲಾ ಸಹಿತ ಆರು ಮಂದಿ ಸ್ವ ಇಚ್ಚೆಯಿಂದ ಪೊಲೀಸರಿಗೆ ಶರಣಾಗಿದ್ದರು.
ಇದೀಗ ಇವರೆಲ್ಲರೂ ತಮ್ಮ ಶಿಕ್ಷಣವನ್ನು ಮತ್ತೆ ಆರಂಭಿಸಲು ಉತ್ಸುಕರಾಗಿದ್ದು, ಹತ್ತನೇ ತರಗತಿ ಪರೀಕ್ಷೆಗೆ ತಯಾರಾಗುತ್ತಿದ್ದಾರೆ. ಜಿಲ್ಲಾ ಪೊಲೀಸ್ ಉಪ ಕ್ರಮದ ಭಾಗವಾಗಿ ರಾಜ್ಯ ಮುಕ್ತ ಶಾಲೆಯ ಹತ್ತನೇ ತರಗತಿ ಪರೀಕ್ಷೆಗೆ ಅಣಿಯಾಗುತ್ತಿದ್ದಾರೆ.
ಹೇಮ್ಲಾ ಮತ್ತು ಪತ್ನಿ ಅನಿತಾ ಶಿಬಿರದಿಂದ 2019ರಲ್ಲಿ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ಶರಣಾಗಿದ್ದರು. ಆ ಮೂಲಕ ಸಾಮಾನ್ಯ ಜೀವನ ನಡೆಸಲು ಮುಂದಾಗಿದ್ದರು. ಇದೀಗ ಪೊಲೀಸರ ಸಹಕಾರದೊಂದಿಗೆ ಶಿಕ್ಷಣ ಮುಂದುವರಿಕೆಗೆ ಅವರು ಆಸಕ್ತಿ ಹೊಂದಿದ್ದಾರೆ. ಇನ್ನು ನಕ್ಸಲಿಸಂನಿಂದ ಮುಕ್ತಿಗೊಳ್ಳಲು ಪೊಲೀಸರಿಗೆ ಶರಣಾದ ಮಂಗ್ಲು ವೆಕೊ (28) ಮತ್ತು ರಾಜೇಸ್ ಅಲಿಯಾಸ್ ವೊಂಜಾ (25) ದಂಪತಿ ಕೂಡಾ ಅಧ್ಯಯನದ ಅವಕಾಶ ಪಡೆದುಕೊಂಡಿದ್ದಾರೆ.
ಇವರೆಲ್ಲರೂ ಶಿಕ್ಷಣ ಪಡೆಯಲು ಆಸಕ್ತಿ ಹೊಂದಿರುವುದರ ಬಗ್ಗೆ ತಿಳಿಸಿದಾಗ ಅವರಿಗೆ ಪುಸ್ತಕಗಳನ್ನು ಒದಗಿಸಲಾಯಿತು. ಅಲ್ಲದೆ ಹತ್ತನೇ ತರಗತಿಯ ಮುಕ್ತ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಹಾಯ ಮಾಡಲಾಯಿತು. ಉಚಿತ ತರಬೇತಿ ನೀಡಿ ಅವರನ್ನು ಪರೀಕ್ಷೆಗೆ ತಯಾರುಗೊಳಿಸಲಾಗುವುದು ಎಂದು ಕಬೀರ್ಧಾಮ್ ಪೊಲೀಸ್ ವರಿಷ್ಠಾಧಿಕಾರಿ ಲಾಲ್ ಉಮೇದ್ ಸಿಂಗ್ ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.