ಬಳ್ಳಾರಿ, ಜ 15 (DaijiworldNews/DB): ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಕಟ್ಟಿ ನೂರು ಪ್ರತಿಶತಃ ತಪ್ಪು ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಪಕ್ಷ ಸ್ಥಾಪನೆ ಬೇಡವೆಂದರೂ ಅವರು ಕೇಳಲಿಲ್ಲ ರಾಜಕೀಯದಲ್ಲಿ ತಾಳ್ಮೆ ಅಗತ್ಯ. ಅವರು ತಪ್ಪಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗಲೂ ಅವರ ಮನವೊಲಿಸುವ ಪ್ರಯತ್ನವನ್ನು ಶ್ರೀರಾಮುಲು ಅವರು ಮಾಡುತ್ತಿದ್ದಾರೆ. ಆದಾಗ್ಯೂ ಚುನಾವಣಾಪೂರ್ವದಲ್ಲಿ ಅದು ಅಸಾಧ್ಯ ಎಂದರು.
ಸಹೋದರ ಜೈಲಿನಲ್ಲಿದ್ದುದರಿಂದ ಆಗಾಗ ನ್ಯಾಯಾಲಯಗಳಿಗೆ ಓಡಾಟ ಇರುತ್ತದೆ ಎಂಬ ಕಾರಣಕ್ಕಾಗಿ 2013ರಲ್ಲಿ ನಾನು ಸ್ಪರ್ಧಿಸಿರಲಿಲ್ಲ. ಆದರೆ ಇದೀಗ ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿಯಿಂದ ನನ್ನ ಸ್ಪರ್ಧೆ ಖಚಿತವಾಗಿದೆ. ಜನಾರ್ದನ ರೆಡ್ಡಿಯವರು ಬಳ್ಳಾರಿ ನಗರದಲ್ಲಿ ಸ್ಪರ್ಧಿಸಿದರೂ, ನಾನು ಸ್ಪರ್ಧಿಸುತ್ತೇನೆ. ಬಿಜೆಪಿ ಬಿಟ್ಟು ಹೋಗುವ ಯೋಚನೆಯನ್ನು ಎಂದಿಗೂ ಮಾಡುವುದಿಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.