ಬೆಂಗಳೂರು, ಜ 15 ( DaijiworldNews/MS): ಸರ್ಕಾರ ಲೂಟಿ ಮಾಡುವುದು ನಿಲ್ಲಿಸಿದರೆ ಸಮೃದ್ಧ ಕರ್ನಾಟಕ ನಿರ್ಮಾಣವಾಗುತ್ತೆ ಎಂದು ಬಿಜೆಪಿಗೆ ಟ್ವೀಟ್ ನಲ್ಲಿ ಕಾಂಗ್ರೆಸ್ ತಿರುಗೇಟು ನೀಡಿದೆ.
ಕಾಂಗ್ರೆಸ್ ನ ಉಚಿತ ವಿದ್ಯುತ್ ಘೋಷಣೆ ಬಗ್ಗೆ ಟೀಕಿಸಿದ್ದ ಬಿಜೆಪಿಗೆ ಟ್ವೀಟ್ ನಲ್ಲಿ ಪ್ರತ್ಯುತ್ತರ ನೀಡಿದ್ದು, ನಮ್ಮ 200 ಯೂನಿಟ್ ಉಚಿತ ವಿದ್ಯುತ್ತಿನ ಗೃಹಜ್ಯೋತಿ ಯೋಜನೆಗೆ ಹಣ ಎಲ್ಲಿಂದ ತರುತ್ತಾರೆ ಎಂದು ಸಿಎಂ ಕೇಳಿದ್ದಾರೆ. ಸಿಎಂ ಬೊಮ್ಮಾಯಿ ಅವರೇ, 40% ಕಮಿಷನ್ ಲೂಟಿ ನಿಂತರೆ ಜನಪರ ಯೋಜನೆಗಳಿಗೆ ಹಣ ಕ್ರೋಡೀಕರಿಸಬಹುದು. ನಿಮ್ಮ ಸರ್ಕಾರ ನಡೆಸುತ್ತಿರುವ ಲೂಟಿ ನಿಂತರೆ ಸಮೃದ್ಧ ಕರ್ನಾಟಕವನ್ನು ನಿರ್ಮಿಸಬಹುದು ಎಂದು ಹೇಳಿದೆ.
ಆಡು ತಿನ್ನದ ಸೊಪ್ಪಿಲ್ಲ, ಬಿಜೆಪಿ ಮಾರಾಟ ಮಾಡದ ಹುದ್ದೆಗಳಿಲ್ಲ'! ಕೆಇಎ ಪರೀಕ್ಷೆ, ಉಪನ್ಯಾಸಕರ ನೇಮಕಾತಿಯಲ್ಲೂ ಅಕ್ರಮ ನಡೆದ ಪರಿಣಾಮ 500ಕ್ಕೂ ಹೆಚ್ಚು ಉಪನ್ಯಾಸಕರ ಭವಿಷ್ಯಕ್ಕೆ ಕತ್ತಲಾವರಿಸಿದೆ. ಲೂಟಿಕೋರ ಸರ್ಕಾರದಲ್ಲಿ ಯುವಜನರ ಭವಿಷ್ಯ ಮಣ್ಣುಪಾಲಾಗಿದೆ. ದಮ್ಮು ತಾಕತ್ತಿನ ಡೈಲಾಗ್ ಹೊಡೆಯುವ ಬೊಮ್ಮಾಯಿ ಅವರೇ, ಇದರ ಬಗ್ಗೆ ಮಾತಾಡುವಿರಾ? ಎಂದು ಪ್ರಶ್ನಿಸಿದೆ.