ಕೋಲ್ಕತಾ, ಜ 15 (DaijiworldNews/DB): ದೇಶದ ಪ್ರಧಾನಿಯಾಗುವ ಅರ್ಹತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗಿದೆ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಡಾ. ಅಮರ್ತ್ಯ ಸೇನ್ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಅವರು, ಮಮತಾ ಬ್ಯಾನರ್ಜಿಯವರಿಗೆ ದೇಶದ ಪ್ರಧಾನಿಯಾಗುವ ಎಲ್ಲಾ ಅರ್ಹತೆಯೂ ಇದೆ. ಇತರೆಲ್ಲಾ ಪಕ್ಷಗಳನ್ನು ತಮ್ಮೊಂದಿಗೆ ಒಗ್ಗೂಡಿಸಿಕೊಂಡು ಮುನ್ನಡೆಯುವ ಸಾಮರ್ಥ್ಯವೂ ಅವರಲ್ಲಿದೆ. ಆದರೆ ಅವರದನ್ನು ಸಾಬೀತುಪಡಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಮಾತ್ರ ಲಾಭವಾಗಲಿದೆ ಎಂಬ ಅಭಿಪ್ರಾಯ ತಪ್ಪು. ಡಿಎಂಕೆ, ಟಿಎಂಸಿ, ಎಸ್ಪಿ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಚುನಾವಣೆಗೆ ಈಗಿಂದಲೇ ಶಕ್ತಿ ಮೀರಿ ಪ್ರಯತ್ನ ನಡೆಸಬೇಕು. ಪ್ರಾದೇಶಿಕ ಪಕ್ಷಗಳು ಚುನಾವಣೆಗೆ ಉತ್ತಮ ಪಾತ್ರ ನಿರ್ವಹಿಸಬೇಕು ಎಂದರು.
ಬಿಜೆಪಿ ದೇಶದ ಬಗ್ಗೆ ಸಂಕುಚಿತವಾದ ನಿಲುವು ಹೊಂದಿದೆ. ಹಿಂದೂ ಎಂಬ ನೆಲೆಯಲ್ಲಷ್ಟೇ ಆ ಪಕ್ಷ ದೇಶವನ್ನು ಕಾಣುತ್ತಿದೆ. ಆದರೆ ಬಿಜೆಪಿಗೆ ಪರ್ಯಾಯವಾಗಿ ಬೆಳೆಯುವ ಸಾಮರ್ಥ್ಯವನ್ನು ಇತರ ಪಕ್ಷಗಳು ವೃದ್ದಿ ಮಾಡಿಕೊಳ್ಳದಿರುವುದು ದುರಂತ ಎಂದು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.