ನಾಗ್ಪುರ, ಜ 15 (DaijiworldNews/DB): ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಒಡ್ಡಿದ ವ್ಯಕ್ತಿ ಬೆಳಗಾವಿ ಜೈಲಿನಲ್ಲಿರುವುದಾಗಿ ನಾಗ್ಪುರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಜಯೇಶ್ ಕಾಂತ ಎಂಬಾತ ಸಚಿವ ಗಡ್ಕರಿ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾನೆ. ಈತ ಕುಖ್ಯಾತ ದರೋಡಕೋರ ಹಾಗೂ ಕೊಲೆ ಆರೋಪಿಯಾಗಿದ್ದು, ಪುತ್ತೂರಿನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಬೆಳಗಾವಿ ಜೈಲಿನಲ್ಲಿದ್ದಾನೆ. ಎಡಿಜಿಪಿ ಅಲೋಕ್ಕುಮಾರ್ ಅವರಿಗೂ ಈ ಹಿಂದೆ ಜೈಲಿನಿಂದಲೇ ಕರೆ ಮಾಡಿ ಜೀವ ಬೆದರಿಕೆಯೊಡ್ಡಿದ್ದ ಎಂದು ತಿಳಿದು ಬಂದಿದೆ.
ಜೈಲಿನೊಳಗೆ ಅಕ್ರಮವಾಗಿ ಮೊಬೈಲ್ ಬಳಕೆ ಮಾಡಿಕೊಂಡು ಗಡ್ಕರಿ ಅವರ ಕಚೇರಿಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಚಿವರಿಗೆ ಜೀವ ಬೆದರಿಕೆ ಒಡ್ಡಿದ್ದಾನೆ. ಸದ್ಯ ನಾಗ್ಪುರ ಪೊಲೀಸರು ಬೆಳಗಾವಿಗೆ ತನಿಖೆಗಾಗಿ ತೆರಳಿದ್ದು, ಪ್ರೊಡಕ್ಷನ್ ರಿಮಾಂಡ್ ಕೇಳಿದೆ ಎಂದು ನಾಗ್ಪುರದ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ.
ಶನಿವಾರ ಬೆಳಗ್ಗೆ 11.25 ರಿಂದ ಮಧ್ಯಾಹ್ನ 12.30 ರ ನಡುವೆ ಮೂರು ಬಾರಿ ಸಚಿವ ನಿತಿನ್ ಗಡ್ಕರಿ ಕಚೇರಿಯ ಲ್ಯಾಂಡ್ಲೈನ್ ದೂರವಾಣಿಗೆ ಕರೆ ಮಾಡಿ ಸಚಿವರಿಗೆ ಜೀವ ಬೆದರಿಕೆ ಒಡ್ಡಲಾಗಿತ್ತು. ದಾವೂದ್ ಇಬ್ರಾಹಿಂ ಗ್ಯಾಂಗ್ನ ಸದಸ್ಯನೆಂದು ಹೇಳಿಕೊಂಡ ವ್ಯಕ್ತಿ100 ಕೋಟಿ ರೂ.ಗಳಿಗೆ ಬೇಡಿಕೆಯಿಟ್ಟಿದ್ದ. ಅಲ್ಲದೆ ತನ್ನ ಮೊಬೈಲ್ ಸಂಖ್ಯೆ ಮತ್ತು ಕರ್ನಾಟಕದಲ್ಲಿರುವ ವಿಳಾಸವನ್ನೂ ಆತ ಹಂಚಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನಾಗ್ಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಅಲ್ಲದೆ ಗಡ್ಕರಿ ನಿವಾಸ ಮತ್ತು ಕಚೇರಿಗೆ ಭದ್ರತೆ ಹೆಚ್ಚಿಸಲಾಗಿದೆ.