ಚೀರ್ ಬಾಗ್( ಉತ್ತರಾಖಂಡ), ಜ 14 (DaijiworldNews/DB): ವೀರ ಯೋಧರಿಂದಾಗಿ ದೇಶದ ಗಡಿಗಳು ಸುರಕ್ಷಿತವಾಗಿವೆ. ದೇಶಕ್ಕಾಗಿ ಅವರು ಸಲ್ಲಿಸುವ ಸೇವೆ, ಅವರ ಶೌರ್ಯವನ್ನು ಹೇಳಲು ಪದಗಳು ಸಾಕಾಗದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಹುತಾತ್ಮ ಯೋಧರಿಗೆ ಸಮರ್ಪಿತವಾಗಿರುವ ಶೌರ್ಯ ಸ್ಥಲ ಯುದ್ಧ ಸ್ಮಾರಕವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದ ಅವರು, ದೇಶವು ನಮ್ಮ ಯೋಧರ ಶೌರ್ಯ, ಧೈರ್ಯ, ಸಾಹಸದಿಂದಾಗಿ ಹೆಮ್ಮೆಯಿಂದ ತಲೆ ಎತ್ತಿ ನಿಂತಿದೆ. ಸೈನಿಕರಿಂದಾಗಿ ದೇಶದ ಗಡಿಗಳು ಸುರಕ್ಷಿತವಾಗಿವೆ. ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಯಲ್ಲಿ ಯೋಧರ ಕೊಡುಗೆ ಹಿರಿದು. ಅವರ ಶೌರ್ಯವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದರು.
ಯೋಧರು, ಅವರ ಕುಟುಂಬದ ಕಲ್ಯಾಣಕ್ಕಾಗಿ ಸರ್ಕಾರ ತನ್ನ ಕರ್ತವ್ಯವಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಅದನ್ನಿಲ್ಲ ಹೇಳಲು ಬಯಸುವುದಿಲ್ಲ. ಯೋಧರು, ಅವರ ಮನೆಗೆ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯ. ದೇಶವೇ ಯೋಧರಿಗೆ ಋಣಿಯಾಗಿದೆ ಎಂದವರು ಹೇಳಿದರು.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಅವರೊಂದಿಗೆ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ನೆರವೇರಿಸಿದ ರಕ್ಷಣಾ ಸಚಿವರು, ದೇಶಕ್ಕಾಗಿ ಸೇವೆ ಸಲ್ಲಿಸಿ ಹುತಾತ್ಮರಾದ ರಾಜ್ಯದ ವೀರ ಯೋಧರಿಗೆ ಗೌರವ ಸಲ್ಲಿಸಿದರು.