ಮುಂಬೈ, ಜ 14 (DaijiworldNews/DB): ಕುದುರೆ ಸವಾರಿ ಮಾಡುವಾಗ ಬಿದ್ದು ಗಾಯಗೊಂಡ ನಟ ರಣದೀಪ್ ಹೂಡಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ಸಂಪೂರ್ಣ ಬೆಡ್ ರೆಸ್ಟ್ಗೆ ವೈದ್ಯರು ಸಲಹೆ ಮಾಡಿದ್ದಾರೆ.
ನಟ ರಣದೀಪ್ ಹೂಡಾ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ರವೊಂದರ ಚಿತ್ರೀಕರಣದ ವೇಳೆ ಅವರು ಕುದುರೆ ಸವಾರಿ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದರು. ಈ ವೇಳೆ ಅವರು ಪ್ರಜ್ಞೆ ಕಳೆದುಕೊಂಡಿದ್ದರು ಎಂದು ತಿಳಿದು ಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ನಟ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಹಲವು ದಿನಗಳ ಕಾಲ ಬೆಡ್ ರೆಸ್ಟ್ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಸಲ್ಮಾನ್ ಖಾನ್ ಅವರೊಂದಿಗೆ ರಾಧೆ ಚಿತ್ರದ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಗಾಯಗೊಂಡು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಇನ್ಸ್ಪೆಕ್ಟರ್ ಅವಿನಾಶ್ ಸರಣಿ ಚಿತ್ರೀಕರಣದ ವೇಳೆಯೂ ಗಾಯಗೊಂಡಿದ್ದಕ್ಕಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಮತ್ತೆ ಅವರು ಬಿದ್ದು ಗಾಯಗೊಂಡಿದ್ದಾರೆ.