ನವದೆಹಲಿ, ಜ 14 (DaijiworldNews/DB): ರಾಮ ಜನ್ಮ ಸ್ಥಳದಿಂದ ಸೀತೆಯ ಜನ್ಮಸ್ಥಳಕ್ಕೆ ರೈಲ್ವೇ ಪ್ರವಾಸಿ ಪ್ಯಾಕೇಜ್ನ್ನು ಆರಂಭಿಸಲು ಭಾರತೀಯ ರೈಲ್ವೇ ಇಲಾಖೆ ಸಿದ್ದತೆ ನಡೆಸಿದೆ. ಅಯೋಧ್ಯೆಯಿಂದ ನೇಪಾಳದ ಜಾನಕ್ಪುರದವರೆಗೆ ಪ್ರಯಾಣದ ಅವಕಾಶ ಈ ಪ್ಯಾಕೇಜ್ನಲ್ಲಿ ಲಭ್ಯವಾಗಲಿದೆ.
ಭಾರತ್ ಗೌರವ್ ಡಿಲಕ್ಸ್ ಎಸಿ ಪ್ರವಾಸಿ ರೈಲಿನಲ್ಲಿ ಈ ಪ್ಯಾಕೇಜ್ ಇರಲಿದೆ. ಇದಕ್ಕೆ ʼಶ್ರೀ ರಾಮ-ಜಾನಕಿ ಯಾತ್ರೆʼ ಎಂದು ಹೆಸರಿಡಲಾಗಿದ್ದು, ಫೆಬ್ರವರಿ 17ರಿಂದಲೇ ಕಾರ್ಯಾರಂಭ ಮಾಡಲಿದೆ. ಒಂದು ವಾರದ ಪ್ರವಾಸಿ ಪ್ಯಾಕೇಜ್ನಲ್ಲಿ ವಿವಿಧ ಪ್ರವಾಸಿ ತಾಣಗಳಿಗೆ ಈ ರೈಲು ಭೇಟಿ ನೀಡಲಿದೆ.
ದೆಹಲಿಯಿಂದ ಪ್ರಯಾಣ ಆರಂಭವಾಗಿ ಉತ್ತರ ಪ್ರದೇಶದ ಅಯೋಧ್ಯೆಗೆ ತಲುಪಿ ಅಲ್ಲಿ ರಾಮ ಜನ್ಮಭೂಮಿಯ ದರ್ಶನ ಇರುತ್ತದೆ. ಅಲ್ಲಿಂದ ಬಿಹಾರದ ಸೀತಾಮಡಿಗೆ, ಬಳಿಕ ನೇಪಾಳದ ಜಾನನಕ್ಪುರಕ್ಕೆ ಪ್ರಯಾಣ ಸಾಗಲಿದೆ. ಅಲ್ಲಿಂದ ಮತ್ತೆ ಸೀತಾಮಡಿಗೆ ಬಂದು ಬಳಿಕ ವಾರಣಾಸಿಗೆ ತೆರಳಲಿದೆ. ವಾರಣಾಸಿಯಿಂದ ಬಸ್ನಲ್ಲಿ ಪ್ರಯಾಗ್ರಾಜ್ಗೆ ತೆರಳಿ ಬಳಿಕ ರೈಲಿನಲ್ಲಿ ವಾಪಾಸ್ ದೆಹಲಿಗೆ ಹಿಂತಿರುಗಲಾಗುತ್ತದೆ.
ರೈಲಿನಲ್ಲಿ ಎರಡು ರೆಸ್ಟೋರೆಂಟ್, ಒಂದು ಕಿಷನ್, ಸೆನ್ಸಾರ್ ಆಧರಿತ ಶೌಚಾಲಯಗಳು, ಫುಟ್ ಮಸಾಜರ್ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯವನ್ನು ಒಳಗೊಂಡಿದೆ. ಜಾನಕ್ಪುರ ಮತ್ತು ವಾರಣಾಸಿಯಲ್ಲಿ ತಂಗಲು ಹೊಟೇಲ್ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.
ಇನ್ನು ಈ ಪ್ರವಾಸದಲ್ಲಿ ಪ್ರಯಾಣ ಮಾಡಬೇಕಾದರೆ ಪ್ರತಿಯೊಬ್ಬರಿಗೆ 39,775 ರೂ. ಶುಲ್ಕ ನಿಗದಿಪಡಿಸಲಾಗಿದೆ. ಇಎಂಐ ಮುಖಾಂತರ ಶುಲ್ಕ ಪಾವತಿಸಲೂ ಅವಕಾಶ ಕಲ್ಪಿಸಲಾಗಿದೆ. ಒಂದು ವಾರ ಕಾಲ ಒಟ್ಟು 2,500 ಕಿ.ಮೀ. ದೂರವನ್ನು ಈ ಪ್ರಯಾಣ ಕ್ರಮಿಸಲಿದೆ.