ಹಾಸನ, ಜ 14 (DaijiworldNews/DB): ಮುಂದಿನ ಚುನಾವಣೆಯಲ್ಲಿ ನಾನು ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ದೇವರ ಭವಿಷ್ಯಕ್ಕೂ ರಾಜಕೀಯ ತೀರ್ಮಾನಕ್ಕೂ ತಾಳೆ ಹಾಕುವುದು ಅನಗತ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮಂಡ್ಯದ ಚೊಟ್ಟನಹಳ್ಳಿಯಲ್ಲಿರುವ ಚಿಕ್ಕಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಪೂಜಾರಿ ಮೈಮೇಲೆ ದೇವಿ ಬಂದು ಸಿದ್ದರಾಮಯ್ಯ ಅವರು ಎರಡು ಕ್ಷೇತ್ರದಲ್ಲಿ ನಿಂತಲ್ಲಿ ಮಾತ್ರ ಒಳಿತು ಎಂದು ಹೇಳಿರುವ ಸಂಬಂಧ ಶುಕ್ರವಾರ ತೀವ್ರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಈ ಸ್ಪಷ್ಟನೆ ನೀಡಿದರು.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುದಗನೂರು ಗ್ರಾಮದಲ್ಲಿ ಮಾತನಾಡಿದ ಅವರು, ಅದು ದೈವವಾಣಿ ಮತ್ತು ಯತೀಂದ್ರ ಅಭಿಪ್ರಾಯ. ಆದರೆ ನನ್ನ ಅಭಿಪ್ರಾಯ ಅದಲ್ಲ. ನಾನು ಒಂದೇ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯುವುದಾಗಿ ಹೇಳಿದರು.
ದೇವರು ನುಡಿದ ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ದೇವರ ಭವಿಷ್ಯ ಮತ್ತು ರಾಜಕೀಯ ತೀರ್ಮಾನದ ನಡುವೆ ತಾಳೆ ಅನಗತ್ಯ ಎಂದರು.
ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಟ್ಟು ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಆದರೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂಬುದಾಗಿ ಈ ವೇಳೆ ಹೇಳಿರುವುದರಿಂದ ಯಾವ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.