ನವದೆಹಲಿ, ಜ 14 (DaijiworldNews/DB): ಕೇವಲ 500 ರೂ.ಗಳಿಗೆ ಗ್ಯಾಸ್ ಸಿಲಿಂಡರ್, ಅಗ್ಗವಾದ ಬೆಲೆಗೆ ಪೆಟ್ರೋಲ್, ಡೀಸೆಲ್, ಉದ್ಯೋಗ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಈ ಸಂಬಂಧ ಅವರು ದೇಶದ ಜನತೆಗೆ ಪತ್ರ ಬರೆದಿದ್ದಾರೆ.
ಭಾರತ್ ಜೋಡೋ ಯಾತ್ರೆ ಮುಕ್ತಾಯದ ಹಂತದಲ್ಲಿರುವಂತೆ, ಜನರ ಸಮಸ್ಯೆಗಳನ್ನು ಈಡೇರಿಸುವ ಬಗ್ಗೆ ಭರವಸೆ ನೀಡಿ ಪತ್ರ ಬರೆದಿರುವ ಅವರು, ಜನರ ದೈನಂದಿನ ಜೀವನಕ್ಕೆ ಬೇಕಾಗುವ ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್, ಉದ್ಯೋಗದ ಕುರಿತು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜನವರಿ 30ರಂದು ಭಾರತ್ ಜೋಡೋ ಯಾತ್ರೆ ಸಮಾಪನಗೊಳ್ಳಲಿದೆ. ಜನವರಿ 26ರಿಂದಲೇ ಕೇಂದ್ರದ ವಿರುದ್ದ ಚಾರ್ಜ್ಶೀಟ್ ಜೊತೆಗೆ ರಾಹುಲ್ ಗಾಂಧಿ ಜನರಿಗೆ ಬರೆದ ಪತ್ರವನ್ನು ಮನೆಮನೆಗೆ ತಲುಪಿಸುವುದಾಗಿ ಕಾಂಗ್ರೆಸ್ ಹೇಳಿದೆ. ಆಪ್ಕಾ ಅಪ್ನಾ ರಾಹುಲ್ ಎಂದು ಪತ್ರಕ್ಕೆ ಸಹಿ ಹಾಕಲಾಗಿದ್ದು, ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿಯೂ ಪತ್ರ ಬರೆಯಲಾಗಿದೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋಯಾತ್ರೆ ನಡೆಸಿದ ವೇಳೆಯ ಅನುಭವಗಳನ್ನು ಕಲೆ ಹಾಕಿ ಜನರ ಸಮಸ್ಯೆಗಳನ್ನು ಕೇಂದ್ರೀಕರಿಸಿಈ ಪತ್ರ ಬರೆಯಲಾಗಿದೆ.
ಜೀವನದ ಅತ್ಯಂತ ಶ್ರೀಮಂತ ಪಯಣ ಇದು. ಪ್ರತಿ ಭಾರತೀಯನೂ ಯಾತ್ರೆಯುದ್ದಕ್ಕೂ ತೋರಿದ ಪ್ರೀತಿ ದೊಡ್ಡದು. ನಿಮ್ಮೆಲ್ಲಾ ಸಮಸ್ಯೆಗಳನ್ನು ನಾನು ಆಲಿಸಿದ್ದೇನೆ. ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಸಂಕಟ ಸೇರಿದಂತೆ ಹಲವು ಸಮಸ್ಯೆಗಳನ್ನು ಹೇಳಿಕೊಂಡಿದ್ದೀರಿ. ಆದಾಯ ಕುಸಿತ, ಕನಸು ಛಿದ್ರದಂತಹ ನೋವಿನಲ್ಲಿ ದೇಶದ ಜನರಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ನಿರ್ನಾಮ ಮಾಡಲು ಬೀದಿಗಿಳಿದು ಸಂಸತ್ತಿನವರೆಗೆ ಪ್ರತಿದಿನ ಹೋರಾಡುತ್ತೇನೆ. ಆರ್ಥಿಕ ಸಮೃದ್ದಿ ಎಲ್ಲರಿಗೆ ಎಂಬ ಸಂಕಲ್ಪ ಮಾಡುತ್ತೇನೆ ಎಂದು ಬರೆದಿದ್ದಾರೆ.