ಚೆನ್ನೈ, ಜ 14 (DaijiworldNews/DB): ರಾಜ್ಯಪಾಲರನ್ನು ಗುಂಡಿಕ್ಕಿ ಕೊಲ್ಲಲು ಓರ್ವ ಉಗ್ರನನ್ನು ನಾವು ಕಳಿಸುತ್ತೇವೆ ಎಂದು ತಮಿಳುನಾಡು ಡಿಎಂಕೆ ಪಕ್ಷದ ವಕ್ತಾರ ಶಿವಾಜಿ ಕೃಷ್ಣಮೂರ್ತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಡಿಎಂಕೆ ನಾಯಕನ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸಭೆಯೊಂದರಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ವಿರುದ್ದ ಮಾತನಾಡುವುದಾಗಲೀ, ತೆಗಳುವುದಾಗಲೀ ಮಾಡಬೇಡಿ ಎಂದು ಮುಖ್ಯಮಂತ್ರಿಯವರು ನಮಗೆ ಈಗಾಗಲೇ ಹೇಳಿದ್ದಾರೆ. ಆದರೆ ರಾಜ್ಯಪಾಲರು ಸರ್ಕಾರದ ಭಾಷಣವನ್ನು ಸರಿಯಾಗಿ ಓದದೆ ತಮ್ಮದೇ ಮಾತುಗಳನ್ನು ಹೇಳಿದ್ದಾರೆ. ಅವರು ಸರ್ಕಾರದ ಭಾಷಣವನ್ನು ಸರಿಯಾಗಿ ಓದಿದ್ದರೆ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೆ. ಆದರೆ ಭಾಷಣದಲ್ಲಿ ಅಂಬೇಡ್ಕರ್ ಹೆಸರನ್ನೇ ಕೈ ಬಿಟ್ಟ ಅವರಿಗೆ ಚಪ್ಪಲಿಯಲ್ಲಿ ಹೊಡೆಯುವ ಹಕ್ಕು ನನಗಿಲ್ಲವೇ ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಹೆಸರು ಹೇಳಲು ಅವರಿಗೆ ಅಸಾಧ್ಯವೆಂದಾದರೆ ಅವರು ಕಾಶ್ಮೀರಕ್ಕೆ ಹೋಗಲಿ. ಅವರಿಗೆ ಶೂಟ್ ಮಾಡಿ ಹತ್ಯೆ ಮಾಡಲು ಉಗ್ರನೊಬ್ಬನನ್ನು ಅಲ್ಲಿಗೆ ಕಳುಹಿಸುತ್ತೇವೆ ಎಂದಿದ್ದಾರೆ.
ಇನ್ನು ಡಿಎಂಕೆ ನಾಯಕನ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿಗೆ ಉಗ್ರರೊಂದಿಗೆ ಸಂಬಂಧವಿರುವ ಶಂಕೆಯಿದೆ. ಅವರನ್ನು ಕೂಡಲೇ ಪೊಲೀಸರು ತನಿಖೆ ನಡೆಸಬೇಕೆಂದು ಬಿಜೆಪಿ ನಾಯಕ ನಾರಾಯಣನ್ ತಿರುಪತಿ ಆಗ್ರಹಿಸಿದ್ದಾರೆ.
ಜನವರಿ 9ರಂದು ತಮಿಳುನಾಡು ವಿಧಾನಸಭಾ ಕಲಾಪ ಆರಂಭವಾದಾಗ ರಾಜ್ಯಪಾಲರು ಭಾಷಣ ಮಾಡುತ್ತಿದ್ದರು. ಈ ವೇಳೆ ಸರ್ಕಾರ ಸಿದ್ದಪಡಿಸಿ ನೀಡಿದ ಭಾಷಣದಲ್ಲಿ ಕೆಲವನ್ನು ಕೈಬಿಟ್ಟು ತಮ್ಮದೇ ಮಾತುಗಳನ್ನು ಸೇರಿಸಿದ್ದರು. ಪೆರಿಯಾರ್, ಬಿ ಆರ್ ಅಂಬೇಡ್ಕರ್, ಕೆ ಕಾಮರಾಜ್, ಸಿ ಎನ್ ಅಣ್ಣಾದೊರೈ, ಕರುಣಾನಿಧಿ ಹೆಸರನ್ನೂ ಓದಿರಲಿಲ್ಲ. ಇದು ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಜಟಾಪಟಿಗೆ ಕಾರಣವಾಗಿತ್ತು. ಇನ್ನು ರಾಜ್ಯಪಾಲರ ನಡೆಯಿಂದ ಅಸಮಾಧಾನಗೊಂಡ ಸಿಎಂ ಸ್ಟಾಲಿನ್ ಅವರು ಈ ವಿಚಾರವಾಗಿ ರಾಷ್ಟ್ರಪತಿಗೆ ಪತ್ರ ಬರೆದು, ಸರ್ಕಾರದೊಂದಿಗೆ ಸೈದ್ದಾಂತಿಕ ಸಂಘರ್ಷಕ್ಕಿಳಿಯದಂತೆ ರಾಜ್ಯಪಾಲರಿಗೆ ಸೂಚಿಸುವಂತೆ ಒತ್ತಾಯಿಸಿದ್ದರು.