ಮುಂಬೈ, ಜ 14 ( DaijiworldNews/MS): ಕ್ರಿಪ್ಟೋಕರೆನ್ಸಿ ಒಂದು ರೀತಿಯ ಜೂಜಾಗಿದ್ದು, ಭಾರತದಲ್ಲಿ ಇದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಶುಕ್ರವಾರ ಮುಂಬೈನಲ್ಲಿ ನಡೆದ, ಬ್ಯಾಂಕಿಂಗ್ ಮತ್ತು ಆರ್ಥಿಕ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಅಧಿವೇಶನದಲ್ಲಿ ಮಾತನಾಡಿದ ಅವರು, "ಎಲ್ಲಾ ಕ್ರಿಪ್ಟೋಗಳನ್ನು ನಿಷೇಧಿಸಬೇಕು ಎನ್ನುವ ಆರ್ ಬಿ ಐ ನ ನಿಲುವು ಬಹಳ ಸ್ಪಷ್ಟವಾಗಿದೆ. ಕ್ರಿಪ್ಟೋ ಎನ್ನುವುದು ಜೂಜಾಟವನ್ನು ಹೊರತುಪಡಿಸಿ ಬೇರೇನೂ ಅಲ್ಲ ಮತ್ತು ಅದು ಯಾವುದೇ ಮೌಲ್ಯವನ್ನು ಹೊಂದಿಲ್ಲ" ಎಂದು ಹೇಳಿದ್ದಾರೆ.
"ಕ್ರಿಪ್ಟೋ ಕೇವಲ ನಂಬಿಕೆಯ ಮೇಲೆ ಕಾರ್ಯನಿರ್ವಹಿಸುತ್ತದೆ . ಇದನ್ನು ವ್ಯಾಖ್ಯಾನಿಸುವುದೇ ಸಾದ್ಯವಾಗುತ್ತಿಲ್ಲ. ಅಲ್ಲದೇ ಭಯೋತ್ಪಾದಕರಿಗೆ ಇದು ಆರ್ಥಿಕ ನಿಧಿಯಾಗುವ ಅಪಾಯವು ಇದೆ. ಅಕ್ರಮ ಚಟುವಟಿಕೆಗಳಿಗೆ ಆಸ್ಪದ ಕಲ್ಪಿಸುತ್ತದೆ" ಎಂದು ಕ್ರಿಪ್ಟೋ ನಿಷೇಧ ಮಹತ್ವವನ್ನು ಒತ್ತಿ ಹೇಳಿದ್ದಾರೆ.
"ಕ್ರಿಪ್ಟೋಕರೆನ್ಸಿಗಳ ಮಾರುಕಟ್ಟೆ ಬೆಲೆಯು ಊಹಾಪೋಹದ ಮೇಲೆ ಆಧಾರಿತವಾಗಿದೆ ಮತ್ತು ಜೂಜಿನಂತೆಯೇ ಇದೆ. ನಮ್ಮ ದೇಶದಲ್ಲಿ, ನಾವು ಜೂಜಾಟವನ್ನು ಅನುಮತಿಸುವುದಿಲ್ಲ. ನೀವು ಜೂಜಾಟವನ್ನು ಅನುಮತಿಸಲು ಬಯಸಿದರೆ, ಅದನ್ನು ಜೂಜಾಟವೆಂದು ಪರಿಗಣಿಸಿ ಮತ್ತು ನಿಯಮಗಳನ್ನು ರೂಪಿಸಿ. ಕ್ರಿಪ್ಟೋ ಆರ್ಥಿಕ ಉತ್ಪನ್ನವಲ್ಲ ಮತ್ತು ಅದೊಂದು ಕೇವಲ ಜೂಜು’ ಎಂದಿದ್ದಾರೆ.