ಕೋಲ್ಕತ್ತ, ಜ 13 (DaijiworldNews/DB): ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದರ ಪುನರ್ಜನ್ಮ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಸೌಮಿತ್ರಾ ಖಾನ್ ಹೇಳಿಕೆ ನೀಡಿದ್ದಾರೆ. ಇದೀಗ ಅವರ ಹೇಳಿಕೆಗೆ ಆಡಳಿತ ಪಕ್ಷ ಸಹತ ವಿವಿಧ ಪಕ್ಷಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಗಿದೆ.
ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖಾನ್, ಸ್ವಾಮೀಜಿ ನಮಗೆ ದೇವರ ಸಮಾನ. ಅವರು ಪ್ರಧಾನಿ ನರೇಂದ್ರ ಮೋದಿಯಾಗಿ ಹೊಸ ಲುಕ್ನಲ್ಲಿ ಮರುಜನ್ಮ ಪಡೆದುಕೊಂಡಿದ್ದಾರೆ ಎಂದರು.
ತಮ್ಮ ತಾಯಿಯನ್ನು ಕಳೆದುಕೊಂಡಾಗಲೂ ಅವರು ತಾಯಿಯ ಅಂತಿಮ ಕ್ರಿಯೆಗಳನ್ನು ಮುಗಿಸಿ ಎಂದಿನ ಕರ್ತವ್ಯಕ್ಕೆ ಹಾಜರಾದ ರೀತಿ, ಅವರು ಆಧುನಿಕ ಭಾರತದ ಸ್ವಾಮಿ ವಿವೇಕಾನಂದರಂತೆಯೇ ಭಾಸವಾಗುತ್ತಾರೆ ಎಂದವರು ಹೇಳಿದರು.
ಇನ್ನು ಖಾನ್ ಹೇಳಿಕೆಗೆ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಟೀಕೆ ವ್ಯಕ್ತಪಡಿಸಿದೆ. ಖಾನ್ ಅವರ ಹೇಳಿಕೆ ಸ್ವಾಮಿ ವಿವೇಕಾನಂದರಿಗೆ ಮಾಡಿದ ಅವಮಾನ. ಸ್ವಾಮೀಜಿ ಸಿದ್ದಾಂತವು ಬಿಜೆಪಿ ಸಿದ್ದಾಂತಕ್ಕೆ ವಿರುದ್ದವಾಗಿದೆ ಎಂಬುದಾಗಿ ಟಿಎಂಸಿ ಸಚಿವ ಮತ್ತು ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಹೇಳಿದ್ದಾರೆ.