ನವದೆಹಲಿ, ಜ 13 (DaijiworldNews/DB): ದೆಹಲಿಯ ಕಾಂಜಾವಾಲದಲ್ಲಿ ಹೊಸ ವರ್ಷದಂದು ನಡೆದಿದ್ದ ಭೀಕರ ಅಪಘಾತದಲ್ಲಿ ಕಾರೊಂದು ದ್ವಿಚಕ್ರ ವಾಹನ ಸವಾರೆಯನ್ನು 12 ಕಿ.ಮೀ.ವರೆಗೆ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದು ರಾತ್ರಿ ಕರ್ತವ್ಯದಲ್ಲಿ ರೋಹಿಣಿ ಜಿಲ್ಲೆಯ 11 ಮಂದಿ ಪೊಲೀಸ್ ಸಿಬಂದಿಯನ್ನು ಅಮಾನತುಗೊಳಿಸಲಾಗಿದೆ.
ಈ ಕುರಿತು ಶುಕ್ರವಾರ ಮಾಹಿತಿ ನೀಡಿರುವ ಅಧಿಕಾರಿಗಳು, ದೆಹಲಿ ಪೊಲೀಸರು ಗುರುವಾರ ನೀಡಿದ ಪ್ರಕರಣ ಸಂಬಂಧ ವರದಿ ಆಧರಿಸಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೂರು ಪಿಸಿಆರ್ ವಾನ್ಗಳಲ್ಲಿ ಮತ್ತು ಎರಡು ಪೊಲೀಸ್ ಪಿಕೆಟ್ಗಳಲ್ಲಿ ಅಂದು ರಾತ್ರಿ 11 ಮಂದಿ ಪೊಲೀಸ್ ಸಿಬಂದಿ ಕರ್ತವ್ಯದಲ್ಲಿದ್ದರು. ಅವರೆಲ್ಲರನ್ನು ಅಮಾನತು ಮಾಡುವಂತೆ ಕೇಂದ್ರ ಗೃಹ ಸಚಿವಾಲಯದ ಶಿಫಾರಸ್ಸಿನ ಮೇರೆಗೆ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಅಂಜಲಿ ಸಿಂಗ್ ಎಂಬ 20 ವರ್ಷದ ಯುವತಿ ಜನವರಿ 1ರಂದು ರಾತ್ರಿ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ ಹೊಡೆದು ಆಕೆ ಕಾರಿನ ಚಕ್ರಕ್ಕೆ ಸಿಲುಕಿದ್ದರಲ್ಲದೆ, ಕಾರಿನಲ್ಲಿದ್ದ ಆರೋಪಿಗಳು ಆಕೆಯನ್ನು 12 ಕಿ.ಮೀ.ವರೆಗೆ ಎಳೆದೊಯ್ದಿದ್ದರು. ಇದರಿಂದಾಗಿ ಯುವತಿ ಭೀಕರವಾಗಿ ಮೃತಪಟ್ಟಿದ್ದಲ್ಲದೆ, ದೇಹದ ಮೇಲೆ 40 ಗಾಯಗಳು ಉಂಟಾಗಿತ್ತು. ಅಪಘಾತದಿಂದಾಗಿ ಆಕೆಯ ಮೆದುಳು ಕಾಣೆಯಾಗಿತ್ತು.