ನವದೆಹಲಿ, ಜ 13 (DaijiworldNews/DB): ಭಾರತ ಅಭಿವೃದ್ದಿಯತ್ತ ವೇಗವಾಗಿ ಸಾಗುತ್ತಿದೆ. ದೇಶದ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಶಬ್ದಗಳಲ್ಲಿ ಹೇಳುವುದು ಅಸಾಧ್ಯ. ಹೃದಯದಿಂದ ಅನುಭವಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಶ್ವದ ಅತಿ ಉದ್ದದ ನದಿ ಕ್ರೂಸ್ ಎಂ ವಿ ಗಂಗಾ ವಿಲಾಸವನ್ನು ಇಂದು ವಾರಣಾಸಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ ವಾರಣಾಸಿಯಲ್ಲಿ ಟೆಂಟ್ ಸಿಟಿಯನ್ನು ಉದ್ಘಾಟಿಸಿದರು. 1 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಲವು ಜಲಾಂತರ್ಗಾಮಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ದೇಶದ ಮೂಲಸೌಕರ್ಯಗಳನ್ನು ರೂಪಾಂತರ ಮಾಡುವ ದಶಕದಲ್ಲಿ ನಾವಿದ್ದೇವೆ. ಭಾರತದ ಸಾಂಸ್ಕೃತಿಕ ಪರಂಪರೆ ಶ್ರೀಮಂತವಾಗಿದೆ. ಭಾರತದಲ್ಲಿ ಎಲ್ಲವೂ ಇದೆ. ಜಾತಿ, ಧರ್ಮ, ಮತ, ದೇಶ, ಬಡವ-ಬಲ್ಲಿದ ಬೇಧವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವ ಭಾರತದ ಬಗ್ಗೆ ಹೃದಯದಿಂದ ಅನುಭವಿಸಲು ಸಾಧ್ಯವೇ ಹೊರತು ಪದಗಳಲ್ಲಿ ವರ್ಣಿಸಲು ಅಲ್ಲ ಎಂದರು.
ವಿಶ್ವದ ಅತಿ ಉದ್ದದ ರಿವರ್ ಕ್ರೂಸ್ ಸೇವೆ ಗಂಗಾ ನದಿಯಲ್ಲಿ ಆರಂಭಗೊಂಡಿರುವುದು ಭಾರತದ ದೊಡ್ಡ ಸಾಧನೆ. ದೇಶದ ಪ್ರವಾಸೋದ್ಯಮಕ್ಕೆ ಇದೊಂದು ಹೊಸ ಅವಕಾಶ. ಕ್ರೂಸ್ ಹೋದಲೆಲ್ಲಾ ಅಭಿವೃದ್ದಿ ಚಿಗುರುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.