ನವದೆಹಲಿ, ಜ 13 (DaijiworldNews/DB): ಚೀನಾದೊಂದಿಗೆ ಹೊಂದಿಕೊಂಡಿರುವ ಎಲ್ಎಸಿಯಲ್ಲಿ (ವಾಸ್ತವಿಕ ಗಡಿ ನಿಯಂತ್ರಣ ರೇಖೆ) ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದೆ ಮುಂದೆ ಊಹನೆ ಮಾಡಲೂ ಸಾಧ್ಯವಾಗದ ರೀತಿಯ ಪರಿಸ್ಥಿತಿಯನ್ನೂ ಅಲ್ಲಗಳೆಯುವಂತಿಲ್ಲ ಎಂದು ಭೂಸೇನೆಯ ಮುಖ್ಯಸ್ಥ ಜ| ಮನೋಜ್ ಪಾಂಡೆ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಎಸಿಯಲ್ಲಿ ಹೆಚ್ಚುವರಿ ಯೋಧರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ಮುಂದೆ ಯಾವುದೇ ರೀತಿಯ ಪರಿಸ್ಥಿತಿ ಬಂದರೂ ಎದುರಿಸಲು ಇವರೆಲ್ಲರೂ ಸಜ್ಜಾಗಿದ್ದಾರೆ ಎಂದರು.
ಚೀನಾದಿಂದ ಯಾವುದೇ ಸವಾಲು ಎದುರಿಸುವ ಸಂದರ್ಭ ಬಂದರೂ ನಮ್ಮ ಸೈನಿಕರು ಚೀನೀಯರನ್ನು ಮಟ್ಟ ಹಾಕಲು ಸಶಕ್ತರಾಗಿದ್ದಾರೆ. ಅದಕ್ಕಾಗಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಈಗಾಗಲೇ ಏಳು ಬಿಕ್ಕಟ್ಟಿನ ಅಂಶಗಳ ಪೈಕಿ ಚೀನಾದೊಂದಿಗೆ ನಡೆದ ಮಾತುಕತೆಯ ಭಾಗವಾಗಿ ಐದು ಬಿಕ್ಕಟ್ಟು ಪರಿಹಾರವಾಗಿದೆ ಎಂದವರು ತಿಳಿಸಿದರು.
ಪೂರ್ವ ವಲಯದಲ್ಲಿ ಚೀನಾ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೀಡು ಬಿಟ್ಟಿದ್ದಾರೆ. ಹೀಗಾಗಿ ಲಡಾಕ್ ಸೇರಿದಂತೆ ಚೀನಾದೊಂದಿಗೆ ಇರುವ ಗಡಿ ಪ್ರದೇಶದಲ್ಲಿ ನಮ್ಮ ಸೈನಿಕರಿಗೆ ಬೇಕಾಗಿರುವ ಅಗತ್ಯ ಮೂಲ ಸೌಕರ್ಯಗಳನ್ನು ವೃದ್ದಿಸಲಾಗಿದೆ. ಸಿಕ್ಕಿಂ ಸೇರಿದಂತೆ ಗಡಿ ಪ್ರದೇಶಗಳಲ್ಲಿ ಆಗುವ ಬದಲಾವಣೆಗಳ ಮೇಲೆ ನಮ್ಮ ಸೈನಿಕರು ಹದ್ದಿನ ಕಣ್ಣಿಟ್ಟಿದ್ದಾರೆ. 2021 ಫೆಬ್ರವರಿಯಲ್ಲಿ ಪಾಕ್ನೊಂದಿಗೆ ಕದನ ವಿರಾಮ ಒಪ್ಪಂದ ಜಾರಿಯಾದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಣೆ ಕಾಣುತ್ತಿದೆ. ಆದರೆ ಎಲ್ಒಸಿಯಲ್ಲಿ ಉಗ್ರರ ಒಳನುಸುಳುವಿಕೆ ಇನ್ನೂ ನಡೆಯುತ್ತಿದೆ ಎಂದರು.